ಕಾವೂರು: ಮೆಸ್ಕಾಂ ದರ ಏರಿಕೆ ವಿರುದ್ಧ ಡಿವೈಎಫ್ಐ ಪ್ರತಿಭಟನೆ
ಮಂಗಳೂರು, ಜು.8: ನಿರಂತರ ವಿದ್ಯುತ್ ದರ ಹೆಚ್ಚಳ ಮತ್ತು ಹೆಚ್ಚುವರಿ ಡಿಪಾಸಿಟ್ ವಸೂಲಿ ವಿರುದ್ಧ ಗ್ರಾಹಕರ ಡಿವೈಎಫ್ಐ ಕಾವೂರು ವಿಭಾಗ ಸಮಿತಿಯ ನೇತೃತ್ರದಲ್ಲಿ ಕಾವೂರು ಮೆಸ್ಕಾಂ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಇಮ್ತಿಯಾಝ್ ಬಿ.ಕೆ. ಮಾತನಾಡಿ ಸರಕಾರವು ಕೆ.ಇ.ಬಿ ಯನ್ನು ಕೆಪಿಟಿಸಿಎಲ್, ಮೆಸ್ಕಾಂ ಇತ್ಯಾದಿಯಾಗಿ ವಿಂಗಡನೆ ಮಾಡಿ ಭ್ರಷ್ಟಾಚಾರ, ಖಾಸಗೀಕರಣ, ನಿರಂತರ ಬೆಲೆ ಏರಿಕೆಗೆ ಕಾರಣವಾಗಿದೆ. ಮೆಸ್ಕಾಂ ಲಾಭದಲ್ಲಿದ್ದರೂ ಗ್ರಾಹಕರನ್ನು ಸುಲಿಯುತ್ತಿದೆ. ಸದ್ಯಕ್ಕೆ ಹೆಚ್ಚಳ ಮಾಡಿರುವ ಬೆಲೆಯನ್ನು ಕೂಡಲೇ ಇಳಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ ಪ್ರತೀ ವರ್ಷ ವಿದ್ಯುತ್ ದರ ಹೆಚ್ಚಳ ಒಂದೆಡೆಯಾದರೆ ಹೆಚ್ಚಿದ ಬಿಲ್ ಮೊತ್ತದ ಆಧಾರದಲ್ಲಿ ಮತ್ತೆ ಮತ್ತೆ ಡಿಪಾಸಿಟ್ ಬಿಲ್ ಕಳುಹಿಸಲಾಗುತ್ತಿದೆ. ಇದು ಹಗಲು ದರೋಡೆಯಾಗಿದೆ. ವಿದ್ಯುತ್ ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವ ವಿಷಯವನ್ನು ಬಂಡವಾಳ ಮಾಡಿಕೊಂಡಿರುವ ಮೆಸ್ಕಾಂ ಇಲಾಖೆಯು ಬಡವರ ಗಾಯದ ಮೇಲೆ ಬರೆ ಎಳೆದಿದೆ ಎಂದು ಆಪಾದಿಸಿದರು.
ಹಿರಿಯ ಅಧಿಕಾರಿ ಜ್ಯೋತಿ ಕಾಮತ್ ಪ್ರತಿಭಟನಾಕಾರರ ಮನ ಸ್ವೀಕರಿಸಿದರು. ಹೋರಾಟದ ನೇತೃತ್ವವನ್ನು ಕಾವೂರು ವಿಭಾಗ ಸಮಿತಿಯ ಮುಖಂಡರಾದ ನೌಶಾದ್ ಪಂಜಿಮೊಗರು, ರವಿಚಂದ್ರ ಕೊಂಚಾಡಿ, ಅನಿಲ್ ಡಿಸೋಜ, ಪ್ರವೀಣ್ ಕೊಂಚಾಡಿ, ಖಲೀಲ್, ಜಯಕುಮಾರ್, ತಾರಾ, ಪ್ರಮೀಳಾ, ತಿಮ್ಮಯ ಕೊಂಚಾಡಿ, ಶರಣ್ದೀಪ್, ದಯಾನಂದ ಶೆಟ್ಟಿಗಾರ್ ಮತ್ತಿತರರು ವಹಿಸಿದ್ದರು.