ಬೀಡಿ ಸುತ್ತಿ ಬದುಕು ಕಟ್ಟಿಕೊಂಡ ಎಂಫಿಲ್ ಪದವೀಧರೆ !
ಕಾಸರಗೋಡು: ಐದು ವರ್ಷದ ಹಿಂದೆ ಈಕೆ ಸೆಲೆಬ್ರಿಟಿ. ಸ್ನಾತಕೋತ್ತರ ಪದವಿ ಪಡೆದ ಕೊರಗ ಸಮುದಾಯದ ಮೊದಲ ಮಹಿಳೆ ಎಂಬ ಕೀರ್ತಿಗೆ ಈಕೆ ಪಾತ್ರಳಾಗಿದ್ದಳು.
2014ರ ಗಣರಾಜ್ಯೋತ್ಸವಕ್ಕೆ ಈಕೆಯನ್ನು ವಿಶೇಷ ಅತಿಥಿಯಾಗಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಹ್ವಾನಿಸಿದ್ದರು. ಕೊರಗ ಸಮುದಾಯದ ಭಾಷೆ ಹಾಗೂ ಸಂಸ್ಕೃತಿ ವಿಷಯದಲ್ಲಿ ಆ ಬಳಿಕ ಎಂಎಫಿಲ್ ಪದವಿಯನ್ನೂ ಪಡೆದರು. ಆದರೆ ಈ ಪ್ರತಿಭಾವಂತ ಯುವತಿ ಈಗ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ !
ಈ ಸಾಧಕಿ ಮೀನಾಕ್ಷಿ ಬೊಡ್ಡೋಡಿ. "ಪ್ರತಿದಿನ 500-600 ಬೀಡಿ ಕಟ್ಟುತ್ತೇನೆ" ಎಂದು ಅವರು ಹೇಳುತ್ತಾರೆ. 1000 ಬೀಡಿ ಕಟ್ಟಿದರೆ ಸಿಕ್ಕುವುದು 150 ರೂಪಾಯಿ. ಸಾಮಾನ್ಯವಾಗಿ 1000 ಬೀಡಿ ಕಟ್ಟಲು 2 ದಿನ ಬೇಕಾಗುತ್ತದೆ ಎಂದು ಹೇಳುತ್ತಾರೆ.
ಆದರೆ ಈ ಹಣ ಕೂಡಾ ಕುಟುಂಬಕ್ಕೆ ಮುಖ್ಯ. ಪತಿ ರತ್ನಾಕರ (35) ಖಾಸಗಿ ಬಸ್ನಲ್ಲಿ ಕೆಲಸ ಮಾಡುತ್ತಾರೆ. ಆದರೆ ವಾರಕ್ಕೆ ಎರಡು ದಿನವಷ್ಟೇ ಕೆಲಸ. ಈ ದಂಪತಿಗೆ ಮೂರು ವರ್ಷದ ಮಗ ಇದ್ದಾನೆ. ರತ್ನಾಕರ ಅವರ ವೃದ್ಧ ತಂದೆ ತಾಯಿಯ ಜೀವನವೂ ಈ ಪುಟ್ಟ ಆದಾಯದಲ್ಲಿ ಸಾಗಬೇಕು. ಮೀನಾಕ್ಷಿ ಶಿಕ್ಷಕಿಯಾಗಬಯಸಿದ್ದರು. ಆದರೆ ಬಿಇಡಿ ಕೋರ್ಸ್ನಲ್ಲಿ ಮನಃಶಾಸ್ತ್ರ ವಿಷಯದಲ್ಲಿ ಸಾಕಷ್ಟು ಅಂಕ ಗಳಿಸಲು ಸಾಧ್ಯವಾಗಲಿಲ್ಲ.
ಇದೀಗ ಕಾಸರಗೋಡಿನಲ್ಲಿ ಬುಡಕಟ್ಟು ಅಭಿವೃದ್ಧಿ ಇಲಾಖೆಯಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.