ಸುರತ್ಕಲ್ ಟೋಲ್ ಕೇಂದ್ರದಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ: ತಡೆಗೆ ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿ ಭೇಟಿ
ಮಂಗಳೂರು: ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಸ್ಥಳೀಯ ಖಾಸಾಗಿ ವಾಹನಗಳಿಗೆ ಜು.16 ರಿಂದ ಸುಂಕ ವಿಧಿಸುವ ಹೆದ್ದಾರಿ ಪ್ರಾಧಿಕಾರದ ತೀರ್ಮಾನಕ್ಕೆ ತಡೆ ವಿಧಿಸಬೇಕು ಎಂದು ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ಇಂದು ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿತು.
ಟೋಲ್ ಗೇಟನ್ನು ಶಾಶ್ವತವಾಗಿ ಮುಚ್ವುವ ತೀರ್ಮಾನ ಜಾರಿಯಾಗಬೇಕು, ಯಾವುದೇ ಕಾರಣಕ್ಕೂ ಜು. 16 ರಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿತು.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಬೇಕು, ಅಲ್ಲಿಯವರಗೆ ಯಥಾಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿತು. ಜನರ ಆಗ್ರಹವನ್ನು ಮೀರಿ ಸುಂಕ ಸಂಗ್ರಹಿಸಲು ಮುಂದಾದರೆ ಸಮಿತಿ ಅದನ್ನು ತಡೆಯಲಿದೆ. ಜು.16 ಬೆಳಗ್ಗೆ 7 :30ಕ್ಕೆ ಪಕ್ಷಾತೀತವಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಂಘಟನೆ ಪ್ರಮುಖರು, ನಾಗರಿಕರ ಬೆಂಬಲದೊಂದಿಗೆ ಟೋಲ್ ಗೇಟ್ ಮುಂಭಾಗ ಸೇರಲಿದ್ದು, ಟೋಲ್ ಸಂಗ್ರಹಕ್ಕೆ ಮುಂದಾದರೆ ಸಾಮೂಹಿಕವಾಗಿ ತಡೆಯಲಾಗುವುದು ಎಂದು ತಿಳಿಸಲಾಯಿತು.
ಜಿಲ್ಲಾಧಿಕಾರಿ ನಮ್ಮ ಬೇಡಿಕೆಗಳನ್ನು ಆಲಿಸಿ ಈ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯ ಜೊತೆಗೆ ಚರ್ಚಿಸಿ ಪರಿಹಾರಕ್ಕೆ ಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕಾರ್ಪೊರೇಟರ್ ಗಳಾದ ರೇವತಿ ಪುತ್ರನ್, ಪುರುಷೋತ್ತಮ ಚಿತ್ರಾಪುರ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಮುಲ್ಕಿ ನಾಗರಿಕ ವೇದಿಕೆಯ ಹರೀಶ್ ಪುತ್ರನ್, ಧನಂಜಯ್ ಮಟ್ಟು, ಇಕ್ಕಾಲ್ ಮುಲ್ಕಿ, ವಸಂತ ಬೆರ್ನಾಡ್, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಝ್, ಸಂತೋಷ್ ಬಜಾಲ್, ಸಾಮಾಜಿಕ ಕಾರ್ಯಕರ್ತರಾದ ಎಮ್ ಜಿ ಹೆಗ್ಡೆ, ಗಂಗಾಧರ ಬಂಜನ್ ಕುಳಾಯಿ, ಹುಸೈನ್ ಕಾಟಿಪಳ್ಖ, ಹರೀಶ್ ಪೇಜಾವರ ಸುರತ್ಕಲ್ ನಾಗರಿಕ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ರಘು ಎಕ್ಕಾರು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶಾಲೆಟ್ ಪಿಂಟೊ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ರಮೇಶ ಟಿ ಎನ್, ಶ್ರೀನಾಥ್ ಕುಲಾಲ್, ಅಜ್ಮಲ್ ಅಹ್ಮದ್, ರಾಜೇಶ್ ಶೆಟ್ಟಿ ಪಡ್ರೆ, ತಾಲೂಕು ಪಂಚಾಯತ್ ಸದಸ್ಯ ಬಶೀರ್ ಬಿ ಎಸ್, ರಶೀದ್ ಮುಕ್ಕ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ, ಮೊಯ್ದಿನ್ ಶೆರೀಫ್ ಮತ್ತಿತರರು ಉಪಸ್ಥಿತರಿದ್ದರು.