ಗೋ ಮಾಂಸ ವಿಚಾರದಲ್ಲಿ ಕೇಂದ್ರದ ದ್ವಂದ ನಿಲುವು: ಮಾಂಸ ವ್ಯಾಪಾರಸ್ಥರ ಸಂಘ ಆರೋಪ
ಮಂಗಳೂರು, ಜು.16: ಗೋ ಮಾಂಸ ವಿಚಾರದಲ್ಲಿ ಕೇಂದ್ರ ಸರಕಾರವು ದ್ವಂದ ನಿಲುವು ತಾಳುತ್ತಿವೆ ಎಂದು ದ.ಕ.ಜಿಲ್ಲಾ ಮಾಂಸ ವ್ಯಾಪಾರಸ್ಥರ ಸಂಘ ಆರೋಪಿಸಿದೆ.
ಸಂಘದ ಅಧ್ಯಕ್ಷ ಅಲಿ ಹಸನ್ ಕುದ್ರೋಳಿ ಹೇಳಿಕೆಯೊಂದನ್ನು ನೀಡಿ ‘ಕೇಂದ್ರ ಸರಕಾರವು ವಿದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗೋ ರಫ್ತು ಮಾಡಲು ನಿರ್ಧರಿಸಿದೆ. ಆದರೆ ಬಿಜೆಪಿ ಮತ್ತದರ ಅಂಗ ಸಂಸ್ಥೆಗಳ ಕಾರ್ಯಕರ್ತರು ದೇಶಾದ್ಯಂತ ಗೋ ಮಾಂಸ ವ್ಯಾಪಾರಿಗಳಿಗೆ, ಗೋ ಮಾಂಸ ಸೇವಿಸುವವರಿಗೆ ನಿರಂತರ ಹಲ್ಲೆ, ದೌರ್ಜನ್ಯ ನಡೆಸುತ್ತಿದ್ದಾರೆ. ದೇಶದ ಗೋ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಿ ಕೋಟ್ಯಂತರ ರೂಪಾಯಿಯ ಲಾಭ ಗಳಿಸಲು ಆಸಕ್ತಿ ವಹಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶದ ಗೋ ವ್ಯಾಪಾರಿ ಮತ್ತು ಗೋ ಮಾಂಸ ಸೇವಿಸುವವರ ಮೇಲೆ ಹಲ್ಲೆ ನಡೆಸುವ ಮೂಲಕ ದ್ವಂತ ನಿಲುವು ತಾಳುವುದು ಖಂಡನೀಯ.
ದ.ಕ.ಜಿಲ್ಲೆಯಲ್ಲೂ ಗೋ ಸಾಗಾಟದ ನೆಪದಲ್ಲಿ ಅಮಾಯಕರ ಮೇಲೆ ನಿರಂತರ ಹಲ್ಲೆ ನಡೆಸಲಾಗುತ್ತದೆ. ಹಾಗಾಗಿ ಜಿಲ್ಲೆಯ ಸಂಸದರು, ಬಿಜೆಪಿಯ ಶಾಸಕರು ಜಿಲ್ಲೆಯಲ್ಲೂ ಗೋವಿನ ವಿಚಾರದಲ್ಲಿ ನಡೆಯುವ ಕೃಕೃತ್ಯ ತಡೆಯಲು ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.