ನಿರಾಶ್ರಿತರ ಕೇಂದ್ರಕ್ಕೆ ಪರ್ಯಾಯ ನಿವೇಶನ: ವಿಶ್ವನಾಥ ಶೆಟ್ಟಿ

Update: 2019-07-20 13:23 GMT

ಮಂಗಳೂರು, ಜು.20: ನಗರದ ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ವಿಶಾಲವಾದ ಪ್ರದೇಶದಲ್ಲಿ ಜಮೀನು ಮಂಜೂರು ಮಾಡಲು ಮಂಗಳೂರು ತಹಶೀಲ್ದಾರ್‌ಗೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಸೂಚನೆ ನೀಡಿದ್ದಾರೆ.

ಪಚ್ಚನಾಡಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಸಕ್ತ ನಿರಾಶ್ರಿತರ ಪರಿಹಾರ ಕೇಂದ್ರವು ಎರಡು ಎಕರೆ ಜಾಗದಲ್ಲಿದ್ದು, ಸುಮಾರು 150ಕ್ಕೂ ಅಧಿಕ ಮಂದಿ ನಿರಾಶ್ರಿತರು ಇಲ್ಲಿ ವಾಸ್ತವ್ಯದಲ್ಲಿದ್ದಾರೆ. ನಿರಾಶ್ರಿತರಿಗೆ ವಾಸ್ತವ್ಯ ತಾಣವಲ್ಲದೇ, ಅವರಿಗೆ ಉಳಿದ ಸಮಯದಲ್ಲಿ ಕೃಷಿ, ತೋಟಗಾರಿಕೆ, ಗುಡು ಕೈಗಾರಿಕೆ ಸೇರಿದಂತೆ ವೃತ್ತಿ ಮಾಡಲು ವಿಶಾಲ ಜಮೀನು ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದಿನ 15 ದಿನಗಳೊಳಗೆ 10-15 ಎಕರೆ ಜಮೀನು ಮಂಜೂರು ಮಾಡಲು ಅವರು ಆದೇಶಿಸಿದರು.

ರಾಜ್ಯದಲ್ಲಿ 11 ನಿರಾಶ್ರಿತರ ಕೇಂದ್ರಗಳಿದ್ದು, ಈ ಪೈಕಿ ಬೆಂಗಳೂರು ಕೇಂದ್ರ ಉತ್ತಮ ಗುಣಮಟ್ಟದಲ್ಲಿದೆ. ಕೇಂದ್ರ ಕಾರಾಗೃಹಗಳಲ್ಲಿರುವ ಅಪರಾಧಿಗಳು, ಕಾರಾಗೃಹದಲ್ಲಿ ದುಡಿಮೆ ಮಾಡಿದರೆ ಪ್ರತೀದಿನ 175 ರೂ. ವೇತನ ದೊರಕುತ್ತದೆ. ಇದೇ ಮಾದರಿಯಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿರುವವರಿಗೂ ಅವರ ದುಡಿಮೆಗೆ ವೇತನ ನೀಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಕಳುಹಿಸುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ತಿಳಿಸಿದರು.

ಯಾವುದೋ ಕಾರಣದಿಂದ ಭಿಕ್ಷಾಟನೆಯಲ್ಲಿ ತೊಡಗಿದವರನ್ನು, ಯಾವುದೇ ಆಶ್ರಯವಿಲ್ಲದವರನ್ನು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿಡಲಾಗಿದ್ದು, ಇವರಿಗೆ ಘನತೆಯಿಂದ ಜೀವಿಸಲು ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಡಬೇಕಾದುದು ನಮ್ಮ ಕರ್ತವ್ಯ ಎಂದು ವಿಶ್ವನಾಥ ಶೆಟ್ಟಿ ತಿಳಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಪರಿಹಾರ ಕೇಂದ್ರ ಎಲ್ಲ ಕಟ್ಟಡಗಳು, ಅಡುಗೆ ಕೋಣೆ, ಶೌಚಾಲಯ, ಕೈತೋಟವನ್ನು ವೀಕ್ಷಿಸಿದರು. ಕೇಂದ್ರದ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು.

ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಲೋಕಾಯುಕ್ತ ಇನ್‌ಸ್ಪೆಕ್ಟರ್ ಭಾರತೀ, ಕಂದಾಯ ನಿರೀಕ್ಷಕ ಆಸಿಫ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News