'ಬೇಟಿ ಬಚಾವೊ ಬೇಟಿ ಪಡಾವೊ’ ಯೋಜನೆ ಹೆಸರಿನಲ್ಲಿ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ

Update: 2019-07-20 13:56 GMT

ಉಡುಪಿ, ಜು.20: ಕೇಂದ್ರ ಸರಕಾರದ ‘ಬೇಟಿ ಬಚಾವೊ ಬೇಟಿ ಪಡಾವೊ’ ಕಾರ್ಯಕ್ರಮದಡಿಯಲ್ಲಿ 2 ಲಕ್ಷ ರೂ. ನಗದು ಉತ್ತೇಜನ ನೀಡುವುದಾಗಿ ಕೆಲವು ಅನಧಿಕೃತ ಸಂಘಟನೆಗಳು/ಸ್ವಯಂ ಸೇವಾ ಸಂಸ್ಥೆಗಳು/ವ್ಯಕ್ತಿಗಳು ಹೆಣ್ಣು ಮಕ್ಕಳ ವೈಯುಕ್ತಿಕ ಮಾಹಿತಿಯನ್ನು ನಮೂನೆಯಲ್ಲಿ ಪಡೆದು ವಂಚಿಸುತ್ತಿರುವುದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವಾಲಯದ ಗಮನಕ್ಕೆ ಬಂದಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಸಾರ್ವಜನಿಕರ ಗಮನ ಸೆಳೆದಿರುವ ಸಚಿವಾಲಯ,ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿಯಲ್ಲಿ ಯಾರಿಗೂ ನಗದು ವಿತರಣೆ ಮಾಡುವ ಕಾರ್ಯಕ್ರಮ ಇರುವುದಿಲ್ಲ. ಅನಧಿಕೃತ ಸಂಸ್ಥೆಗಳು/ ವ್ಯಕ್ತಿಗಳು ಈ ಯೋಜನೆಯಡಿ ಹಣವನ್ನು ನೀಡುವುದಾಗಿ ಭರವಸೆ ನೀಡಿ ಸಾರ್ಜನಿಕರನ್ನು ಮೋಸ ಮಾಡುತ್ತಿವೆ.

ಈ ರೀತಿ ವಂಚನೆ ಮಾಡುವ ಅಥವಾ ಪ್ರಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇಂತಹ ವಂಚನೆಗಳು ಬೆಳಕಿಗೆ ಬಂದಾಗಲೆಲ್ಲಾ ಎಫ್‌ಐಆರ್‌ಗಳನ್ನು ಈಗಾಗಲೇ ನೊಂದಾಯಿಸಲಾಗಿದೆ. ಇಂತಹ ವಂಚಕರ ಬಲೆಗೆ ಬೀಳದಂತೆ ಸಾರ್ವಜನಿಕರಿಗೆ ಸಲಹೆ/ಸೂಚನೆ ನೀಡಲಾಗಿದೆ. ಈ ಯೋಜನೆಯಡಿ ವಂಚಕರು ನಮೂನೆಯಲ್ಲಿ ಕೋರುವ ಯಾವುದೇ ವೈಯುಕ್ತಿಕ ವಿವರಗಳನ್ನು ಅಂದರೆ ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು, ದೂರವಾಣಿ/ಮೊಬೈಲ್ ಸಂಖ್ಯೆ/ಇ-ಮೇಲ್ ಐಡಿ/ ಇತರೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಬಾರದು.

ಇಂತಹ ವಂಚನೆ ಮಾಡುವ ವ್ಯಕ್ತಿಗಳ/ಸಂಸ್ಥೆಗಳ ಹೆಸರನ್ನು ಪೊಲೀಸ್ ಠಾಣೆಗೆ ತಿಳಿಸುವಂತೆ, ಸ್ನೇಹಿತರು, ಸಂಬಂಧಿಕರು ಹಾಗೂ ನಿಮ್ಮನ್ನು ಸಂಪರ್ಕಿಸುವ ಎಲ್ಲರಿಗೂ ಇಂತಹ ವಂಚಕರ ವಿರುದ್ಧ ಜಾಗರೂಕರಾಗಿರುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅಭಿವೃದ್ಧಿ ಇಲಾಖೆಯ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News