ಸರಕಾರಿ ಗೌರವದೊಂದಿಗೆ ಶೀಲಾ ದೀಕ್ಷಿತ್ ಅಂತ್ಯಸಂಸ್ಕಾರ

Update: 2019-07-21 13:51 GMT

ಹೊಸದಿಲ್ಲಿ, ಜು.21: ಶನಿವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ದಿಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಅಂತ್ಯಸಂಸ್ಕಾರ ಸಕಲ ಸರಕಾರಿ ಗೌರವದೊಂದಿಗೆ ದಿಲ್ಲಿಯ ನಿಗಂ ಬೋಧ್ ಘಾಟ್‌ನಲ್ಲಿ ರವಿವಾರ ನೆರವೇರಿತು.

 ರವಿವಾರ ಬೆಳಿಗ್ಗೆ ದಕ್ಷಿಣ ದಿಲ್ಲಿಯಲ್ಲಿರುವ ದೀಕ್ಷಿತ್ ಮನೆಯಿಂದ ಮೃತದೇಹವನ್ನು ಕೇಂದ್ರ ದಿಲ್ಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಗೆ ತರಲಾಯಿತು. ಅಲ್ಲಿಂದ ಮೆರವಣಿಗೆಯಲ್ಲಿ ನಿಗಂ ಬೋಧ್ ಘಾಟ್‌ಗೆ ತರಲಾಯಿತು. ಬಿಜೆಪಿಯ ಹಿರಿಯ ನಾಯಕರಾದ ಎಲ್‌ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಒಮರ್ ಅಬ್ದುಲ್ಲಾ ಸಹಿತ ಹಲವು ಮುಖಂಡರು ಶೀಲಾ ದೀಕ್ಷಿತ್ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅಂತಿಮ ನಮನ ಸಲ್ಲಿಸಿದರು. ಅಮೆರಿಕದಲ್ಲಿರುವ ರಾಹುಲ್ ಗಾಂಧಿ ದೂರವಾಣಿ ಮೂಲಕ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್‌ರನ್ನು ಸಂಪರ್ಕಿಸಿ ಸಾಂತ್ವನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News