ಉಡುಪಿ: 27ಕ್ಕೆ ರಾಜ್ಯ ವಿಶೇಷ ಶಾಲೆಗಳ ಮುಖ್ಯಸ್ಥರ ಸಮಾವೇಶ

Update: 2019-07-24 15:42 GMT

 ಉಡುಪಿ, ಜು.24: ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ರಾಜ್ಯದ ಎಲ್ಲಾ ವಿಶೇಷ ಶಾಲೆಗಳ ಮುಖ್ಯಸ್ಥರ ಸಮಾವೇಶವೊಂದು ಅ.27ರ ಶನಿವಾರ ಬೆಳಗ್ಗೆ 10:30ಕ್ಕೆ ಅಂಬಲಪಾಡಿಯ ಶ್ಯಾಮಿಲಿ ಸಭಾಭವನದಲ್ಲಿ ನಡೆಯಲಿದೆ ಎಂದು ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಸಂತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾವೇಶವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದು, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಕರ್ನಾಟಕ ರಾಜ್ಯ ವಿಶೇಷ ಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಚ್.ವಿ.ಗೋಪಾಲಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

 ಸಭೆಯಲ್ಲಿ ರಾಜ್ಯದ ವಿಶೇಷ ಶಾಲೆಗಳು ಎದುರಿಸುತ್ತಿರುವ ಸಂಕಷ್ಟ, ಅಲ್ಲಿನ ಶಿಕ್ಷಕರ ಕುರಿತಂತೆ ಸರಕಾರಗಳು ತೋರಿಸುತ್ತಿರುವ ಮಲತಾಯಿ ಧೋರಣೆ, ಶಾಲೆಗಳಿಗೆ ಸಿಗದ ಮೂಲಭೂತ ಸೌಕರ್ಯ ಹಾಗೂ ಅನುದಾನಗಳ ಕುರಿತು ವಿಶೇಷ ಚರ್ಚೆಗಳು ನಡೆಯಲಿವೆ.ಇದರೊಂದಿಗೆ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಸಮನ್ವಯ ಶಿಕ್ಷಣ ಸಮಿತಿಗಳು ತಮ್ಮ ಶಾಲೆಗಳ ಮೇಲೆ ಹೇರುತ್ತಿರುವ ಅನಗತ್ಯ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಡಾ.ಶೆಟ್ಟಿ ತಿಳಿಸಿದರು.

ರಾಜ್ಯದಲ್ಲಿ 500ಕ್ಕೂ ಅಧಿಕ ವಿಶೇಷ ಶಾಲೆಗಳಿವೆ. ಇವುಗಳಲ್ಲಿ ಕೆಲವು ಶಾಲೆಗಳು ಮಾತ್ರ ಸರಕಾರದ ಅನುದಾನದಿಂದ ನಡೆಯುತ್ತಿವೆ. ಕರ್ನಾಟಕ ರಾಜ್ಯದಲ್ಲಿ 1982ರ ಅನುದಾನ ನೀತಿ ಸಂಹಿತೆಯಡಿಯಲ್ಲಿ 38 ವಿಶೇಷ ಶಾಲೆಗಳು ಅನುದಾನ ಪಡೆಯುತ್ತಿವೆ. ಇಲ್ಲಿ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ವೇತನವನ್ನು ಮಾತ್ರ ಸರಕಾರ ಭರಿಸುತಿದ್ದು, ಇನ್ಯಾವುದೇ ಅನುದಾನ ಈ ಶಾಲೆಗಳಿಗೆ ಲಭಿಸುತ್ತಿಲ್ಲ. ನಿವೃತ್ತರಾದ ಯಾರಿಗೂ ನಿವೃತ್ತಿ ವೇತನ ಸಿುತ್ತಿಲ್ಲ ಎಂದು ಅವರು ವಿವರಿಸಿದರು.

2010-11ರಲ್ಲಿ ಜಾರಿಗೆ ಬಂದ ಶಿಶು ಕೇಂದ್ರೀಕೃತ ಸಹಾಯಧನ ಯೋಜನೆ ಯಲ್ಲಿ ಸುಮಾರು 136 ಸಂಸ್ಥೆಗಳು ಅನುದಾನವನ್ನು ಪಡೆಯುತಿದ್ದು, ಇಲ್ಲಿ ವಿಶೇಷ ಮಕ್ಕಳ ತಲೆ ಎಣಿಕೆ ಆಧಾರದಲ್ಲಿ ಅನುದಾನ ನೀಡಲಾಗುತ್ತಿದೆ. ಆದರೆ ಭಾರತೀಯ ಪುನರ್ವಸತಿ ಸಂಸ್ಥೆ (ಆರ್‌ಸಿಐ) ಮಾನ್ಯತೆ ಹೊಂದಿದ ತರಬೇತಿ ಶಿಕ್ಷಣವನ್ನು ಪಡೆದ ವಿಶೇಷ ಶಿಕ್ಷಕರು ಮಾತ್ರ ಇಲ್ಲಿ ಕಲಿಸಬೇಕು. ಬಳಿಕ ಆರ್‌ಸಿಐನಲ್ಲಿ ಹೆಸರು ನೊಂದಾಯಿಸಬೇಕು. ಅನಂತರವೂ ಅದನ್ನು ಪುನರ್ ನವೀಕರಣಗೊಳಿಸಬೇಕು ಎಂಬ ನಿಯಮಗಳನ್ನು ಅಂಗವಿಕಲರ ಸಬಲೀಕರಣ ಇಲಾಖೆ ವಿಧಿಸುತ್ತಿರುವುದು ದುರದೃಷ್ಟಕರ ಎಂದು ಅವರು ನುಡಿದರು.

25 ವರ್ಷದಾಟಿದ ವಿಶೇಷ ಚೇತನರಿಗೆ ಯಾವುದೇ ವೃತ್ತಿ ತರಬೇತಿ ಯಾಗಲೀ, ಪುನರ್ವಸತಿ ವ್ಯವಸ್ಥೆಯಾಗಲಿ ರಾಜ್ಯದಲ್ಲಿ ಇರುವುದಿಲ್ಲ. ಅಲ್ಲದೇ ಶಿಶುಕೇಂದ್ರಿತ ಸಹಾಯಧನ ಯೋಜನೆಯಲ್ಲಿ ವಿಶೇಷ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಕನಿಷ್ಠ ವೇತನವೂ ಸಿಗುತ್ತಿಲ್ಲ. ಹೀಗಾಗಿ ಇಲ್ಲಿ ಕಲಿಸುವ ಶಿಕ್ಷಕರಿಗೆ ಯಾವುದೇ ರೀತಿಯ ಆರ್ಥಿಕ ಸೌಲಭ್ಯಗಳಾಗಲಿ, ಸೇವಾ ಭದ್ರತೆಯಾಗಲಿ ಇಲ್ಲ ಎಂದವರು ವಿಷಾಧಿಸಿದರು.

ರಾಜ್ಯದಲ್ಲಿ ಬುದ್ಧಿಮಾಂದ್ಯತೆ ಹೊಂದಿದ ಮಕ್ಕಳಿಗೆ ಹಾಗೂ ವಯಸ್ಕರಿಗೆ ಕೇವಲ ಸರಕಾರೇತರ ಸಂಸ್ಥೆಗಳು ಮಾತ್ರ ತರಬೇತಿ ಹಾಗೂ ವಿಶೇಷ ಶಿಕ್ಷಣವನ್ನು ನೀಡುತ್ತಿವೆ. ರಾಜ್ಯ ಸರಕಾರ ಈವರೆಗೆ ಇವರಿಗೆ ಯಾವುದೇ ವಿಶೇಷ ಶಾಲೆಗಳನ್ನಾಗಲಿ, ಪುನರ್ವಸತಿ ಕೇಂದ್ರಗಳನ್ನಾಗಲಿ ತೆರೆದಿಲ್ಲ. ಈ ನಿಟ್ಟಿನಲ್ಲಿ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೇರ್ಪಡಿಸಿ ಪ್ರತ್ಯೇಕ ಸ್ವತಂತ್ರ ಇಲಾಖೆಯಾಗಿ ಘೋಷಿಸಬೇಕೆಂಬುದು ಸಂಘದ ಆಗ್ರಹವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರ ಸಂಘದ ಅಧ್ಯಕ್ಷೆ ಆಗ್ನೇಸ್ ಕುಂದರ್, ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ಕಾಂತಿ ಹರೀಶ್, ಸ್ಪಂದನಾ ಸಂಸ್ಥೆಯ ಜನಾರ್ದನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News