ಗುಂಪು ಥಳಿತ ವಿರೋಧಿಸಿ ಪ್ರಧಾನಿಗೆ ಪತ್ರ: ಸಹಿ ಹಾಕಿದ್ದ ನಟ ಕೌಶಿಕ್ ಸೇನ್ ಗೆ ಜೀವ ಬೆದರಿಕೆ

Update: 2019-07-25 09:41 GMT

ಕೊಲ್ಕತ್ತಾ, ಜು.25: ದೇಶದಲ್ಲಿ ನಡೆಯುತ್ತಿರುವ ಗುಂಪು ಥಳಿತ ಘಟನೆಗಳಿಗೆ ಅಂತ್ಯ ಹಾಡುವಂತೆ ಆಗ್ರಹಿಸಿ  ಹಾಗೂ ‘ಜೈ ಶ್ರೀ ರಾಮ್’ ಘೋಷಣೆ ಒಂದು ಯುದ್ಧದ ಕರೆಯಾಗಿ ಪರಿವರ್ತಿತವಾಗಿ ಬಿಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ 49 ಮಂದಿ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ನಟ ಕೌಶಿಕ್ ಸೇನ್ ತಮಗೆ ಜೀವ ಬೆದರಿಕೆಗಳು ಬಂದಿವೆ ಎಂದು ಆರೋಪಿಸಿದ್ದಾರೆ.

“ಗುಂಪು ಥಳಿತ ಹಾಗೂ ಅಸಹಿಷ್ಣುತೆಯ ವಿರುದ್ಧ ದನಿಯೆತ್ತುವುದನ್ನು ನಿಲ್ಲಿಸದೇ ಇದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ನಿನ್ನೆ ಅಪರಿಚಿತ ಸಂಖ್ಯೆಯಿಂದ ನನಗೆ ಕರೆ ಮಾಡಿದ ವ್ಯಕ್ತಿ ಬೆದರಿಕೆಯೊಡ್ಡಿದ್ದಾನೆ. ನನ್ನನ್ನು ನಾನು ತಿದ್ದಿಕೊಳ್ಳದೇ ಇದ್ದರೆ ನನ್ನ ಹತ್ಯೆಯಾಗುವುದು ಎಂದೂ ಆತ ಎಚ್ಚರಿಸಿದ್ದಾನೆ'' ಎಂದು ಕೌಶಿಕ್ ಸೇನ್  ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.

“ನಿಜ ಹೇಳಬೇಕೆಂದರೆ ಇಂತಹ ಕರೆಗಳ ಬಗ್ಗೆ ನನಗೆ ಚಿಂತೆಯಿಲ್ಲ. ಪತ್ರಕ್ಕೆ ಸಹಿ ಹಾಕಿದ ಇತರರಿಗೂ ಈ ಕರೆಯ ಬಗ್ಗೆ ತಿಳಿಸಿದ್ದೇನೆ ಹಾಗೂ ಕರೆ ಮಾಡಿದಾತನ ಸಂಖ್ಯೆಯನ್ನೂ ಅವರಿಗೆ ಫಾರ್ವರ್ಡ್ ಮಾಡಿದ್ದೇನೆ'' ಎಂದು ಸೇನ್ ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News