ಶೇ.10 ಮೀಸಲಾತಿ ಪ್ರಶ್ನಿಸಿದ ಅರ್ಜಿ ಸಾಂವಿಧಾನಿಕ ಪೀಠಕ್ಕೆ ವಹಿಸುವ ತೀರ್ಪು ಕಾಯ್ದಿರಿಸಿದ ಸುಪ್ರೀಂ
Update: 2019-07-31 23:51 IST
ಹೊಸದಿಲ್ಲಿ, ಜು.31: ಆರ್ಥಿಕವಾಗಿ ಅಶಕ್ತರಾದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಾಂವಿಧಾನಿಕ ಪೀಠಕ್ಕೆ ಒಪ್ಪಿಸಬೇಕೇ ಎಂಬ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.
ಶೇ.10 ಮೀಸಲಾತಿ ಒದಗಿಸುವ ಸಂವಿಧಾನ (103 ತಿದ್ದುಪಡಿ) ಕಾಯ್ದೆ 2019 ಈಗಲೂ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಸುಮಾರು 200 ಮಿಲಿಯನ್ ಜನರನ್ನು ಉದ್ಧಾರ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ನ್ಯಾಯಮೂರ್ತಿ ಬೊಬ್ಡೆ ನೇತೃತ್ವದ ಪೀಠಕ್ಕೆ ತಿಳಿಸಿದರು. ಮೀಸಲಾತಿ ಒದಗಿಸಲು ಆರ್ಥಿಕ ಮಾನದಂಡ ಏಕೈಕ ಆಧಾರವಾಗದು. ಆದ್ದರಿಂದ ಕಾಯ್ದೆಯ ಸಿಂಧುತ್ವ ಪ್ರಶ್ನಾರ್ಹವಾಗಿದೆ ಎಂದು ತಿಳಿಸಿರುವ ಹಲವಾರು ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ನಡೆಸುತ್ತಿದೆ.