ಕ್ರಿಮಿನಲ್ ಕೇಸುಗಳ ಹಿಂತೆಗೆತ ಯಡ್ಡಿ ಸರಕಾರದ ಅತಿರೇಕದ ಕ್ರಮ: ಎಸ್‍ಡಿಪಿಐ

Update: 2019-08-01 11:48 GMT

ಬೆಂಗಳೂರು: ಕರ್ನಾಟಕದಲ್ಲಿ ಯಡಿಯೂರಪ್ಪ ಸರಕಾರ ಅಸ್ತಿತ್ವಕ್ಕೆ ಬಂದ ಪ್ರಥಮ ದಿನಗಳಿಂದಲೇ ರಾಜ್ಯಕ್ಕೆ ನೀಡುತ್ತಿರುವ ಕೊಡುಗೆ 'ವಿಪರೀತ ವಿಕಾಸವಾಗುತ್ತಿದೆ'. ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ ಬಳಿಕ ಇದೀಗ 2000 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕ್ರಿಮಿನಲ್ ಕೇಸುಗಳನ್ನು ವಾಪಾಸು ಪಡೆಯುವ ನಿರ್ಧಾರ ಕೈಗೊಂಡಿರುವುದು ಖಂಡನೀಯ. ಕೋಮುವಾದ, ಕೊಲೆ, ಗಲಭೆಗಳಲ್ಲಿ ಭಾಗಿಯಾದವರಿಗೆ, ನೆರವಾದವರಿಗೆ ಬಿಜೆಪಿ ಸರಕಾರ ನೆರವು ನೀಡುವುದಾದರೆ ಈ ರಾಜ್ಯದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಉಳಿಯುವುದಾದರೂ ಹೇಗೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಪ್ರಶ್ನಿಸಿದ್ದಾರೆ.

'ನಾನು ದ್ವೇಷ ರಾಜಕಾರಣ ಮಾಡುವುದಿಲ್ಲ' ಎಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಭಾಷಣ ಮಾಡಿದ ಯಡಿಯೂರಪ್ಪ, ಈಗ ಇನ್ನಷ್ಟು ಹೆಚ್ಚಿನ ದ್ವೇಷ ರಾಜಕಾರಣ ಮುಂದುವರಿಸುತ್ತಿದ್ದಾರೆ. ಟಿಪ್ಪು ಜಯಂತಿ ರದ್ದು, 2,000ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳ ಹಿಂಪಡೆತ ಈ ಎರಡೂ ದ್ವೇಷ ರಾಜಕಾರಣದ ವಿಕೃತ ರೂಪವಾಗಿದೆ. ಇದು ರಾಜ್ಯದ ಹಿತಕ್ಕೆ ಮಾರಕ ಹಾಗೂ ರಾಜ್ಯದ ಜನರ ನಡುವೆ ಅಪನಂಬಿಕೆ, ಅಭದ್ರತೆಯನ್ನು ಉಂಟು ಹಾಕುತ್ತದೆ ಎಂದರು.

ಯಡಿಯೂರಪ್ಪನವರು ಮೊದಲು ರಾಜ್ಯದಲ್ಲಿ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಆಲೋಚಿಸುವುದನ್ನು ಪ್ರಾರಂಭಿಸಬೇಕು. ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಆರ್ಭಟಿಸುತ್ತಿದ್ದ ಬರ ಪರಿಹಾರ, ಜಿಂದಾಲ್ ಗೆ ಅಕ್ರಮ ಭೂಮಿ ನೀಡಿಕೆ ಇತ್ಯಾದಿಗಳ ಬಗ್ಗೆ ಈಗ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಆಡಳಿತ ವ್ಯವಸ್ಥೆಯನ್ನು ಮತ್ತೆ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವಲ್ಲಿ ಯಾಕೆ ಬಿಜೆಪಿ ಸರಕಾರ ಮುಂದುವರಿಯುತ್ತಿಲ್ಲ. ಅವುಗಳನ್ನು ಬಿಟ್ಟು ಸದಾ ಕೋಮುವಾದಿ ಚಿಂತನೆಗಳಲ್ಲಿ ತೊಡಗಿಕೊಂಡರೆ ಇಡೀ ರಾಜ್ಯದಲ್ಲಿ ನಡೆಯುವ ಎಲ್ಲಾ ಅನಾಹುತಗಳಿಗೆ ಬಿಜೆಪಿ ಸರಕಾರವೇ ಪ್ರಮುಖ ಕಾರಣವಾಗುತ್ತದೆ ಎಂಬವುದನ್ನು ನೆನಪಿಸಿಕೊಳ್ಳಬೇಕೆಂದು ಎಸ್‍ಡಿಪಿಐ ಬಿಜೆಪಿ ಸರಕಾರವನ್ನು ಎಚ್ಚರಿಸಿದೆ.

ಯಡ್ಡಿ ಸರಕಾರ ಕೈಗೊಂಡ 2,000ಕ್ಕಿಂತಲೂ ಹೆಚ್ಚು ಕೇಸುಗಳ ಹಿಂತೆಗೆತದ ವಿರುದ್ಧ ರಾಜ್ಯದ ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದು ಎಂದು ಎಸ್‍ಡಿಪಿಐ ರಾಜ್ಯಾದ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News