ಮಂಗಳೂರು: ನೇತ್ರಾವತಿ ನದಿಗೆ ಬಿದ್ದು 18 ತಿಂಗಳ ಮಗು ಮೃತ್ಯು

Update: 2019-08-08 16:08 GMT

ಮಂಗಳೂರು, ಆ.8: ನಗರದ ಹೊರವಲಯ ಜಪ್ಪಿನಮೊಗರು ಬಳಿ 18 ತಿಂಗಳ ಮಗು ಆಕಸ್ಮಿಕವಾಗಿ ನೇತ್ರಾವತಿ ನದಿಗೆ ಬಿದ್ದು ಗುರುವಾರ ಮೃತಪಟ್ಟಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಗಳಾದ ರವಿ-ಜ್ಯೋತಿ ದಂಪತಿ ಪುತ್ರ ಅಂಜನ್ ಮೃತಪಟ್ಟ ಮಗು.

ಮೀನು ಹಿಡಿಯುವ ವೃತ್ತಿ ಮಾಡುತ್ತಿದ್ದ ಇವರು ನೇತ್ರಾವತಿ ನದಿ ಕಿನಾರೆಯಲ್ಲಿ ಶೆಡ್‌ನಲ್ಲಿ ವಾಸ ಮಾಡುತ್ತಿದ್ದರು. ಮಧ್ಯಾಹ್ನ ಊಟ ಮಾಡಿ ಮಗುವಿನ ಜತೆ ತಂದೆ, ತಾಯಿ ಮಲಗಿದ್ದರು. ದಂಪತಿಗೆ ನಿದ್ದೆ ಬಂದಿದೆ. ಈ ವೇಳೆ ಮಗು ಎದ್ದು ಹೊರಗೆ ಬಂದಿದೆ.

ನದಿ ಕಿನಾರೆಯಲ್ಲಿ ಇತರ ಮಕ್ಕಳ ಜತೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿದೆ ಎಂದು ಹೇಳಲಾಗಿದ್ದು, ತಕ್ಷಣ ಆ ಮಕ್ಕಳು ಬಂದು ದಂಪತಿಗೆ ವಿಷಯ ತಿಳಿಸಿದ್ದಾರೆ. ಅವರು ನೀರಿನಿಂದ ಮಗುವನ್ನು ಎತ್ತಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಮಗು ಅಷ್ಟರಲ್ಲಿ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News