ಭೂ ಸುಧಾರಣೆ ಕಾಯ್ದೆಯ ಫಲಾನುಭವಿಗಳು ಕಾಂಗ್ರೆಸ್-ಕಮ್ಯುನಿಸ್ಟ್ ಪಕ್ಷದ ಜೊತೆಗುಳಿದಿಲ್ಲ: ಚಂದ್ರಪೂಜಾರಿ

Update: 2019-08-11 09:54 GMT

‘ಕರ್ನಾಟಕದಲ್ಲಿ ಭೂ ಸುಧಾರಣೆ: ಎಲ್ಲಿಂದ ಎಲ್ಲಿಗೆ ?’ ಕುರಿತ ಗೋಷ್ಠಿ

ಮಂಗಳೂರು, ಆ.11: ಭೂ ಸುಧಾರಣೆಯ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಪ್ರಮುಖ ಪಾತ್ರ ವಹಿಸಿವೆ. ಆದರೆ ಈ ಕಾಯ್ದೆಯ ಫಲಾನುಭವಿಗಳ ಕುಟುಂಬಸ್ಥರು ಇಂದು ಈ ಪಕ್ಷಗಳ ಜೊತೆಗಿಲ್ಲ ಎಂದು ಪ್ರೊ. ಚಂದ್ರ ಪೂಜಾರಿ ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ಧುರೀಣ ಬಿ.ವಿ.ಕಕ್ಕಿಲ್ಲಾಯರ ಜನ್ಮ ಶತಾಬ್ದಿಯ ಪ್ರಯುಕ್ತ ನಗರದ ಬಲ್ಮಠದ ಸಹೋದಯ ಸಭಾಂಗಣದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ರವಿವಾರ ನಡೆದ ‘ಕರ್ನಾಟಕದಲ್ಲಿ ಭೂ ಸುಧಾರಣೆ: ಎಲ್ಲಿಂದ ಎಲ್ಲಿಗೆ ?’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ದ.ಕ.ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಭೂ ಸುಧಾರಣೆಯ ಕಾಯ್ದೆಯ ಪ್ರಯೋಜನ ಪಡೆದಿದ್ದರು. ಅದರಲ್ಲೂ ಬಿಲ್ಲವರು ಅತ್ಯಧಿಕ ಸಂಖ್ಯೆಯ ಫಲಾನುಭವಿಗಳಾಗಿದ್ದರು. ಹಿಂದೆ ಗೇಣಿದಾರರ ಆರ್ಥಿಕ ಸ್ಥಿತಿಯು ಅಷ್ಟೇನೂ ಚೆನ್ನಾಗಿರಲಿಲ್ಲ. ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಭೂ ಮಾಲಕರ ಶೋಷಣೆಗೊಳಗಾಗುತ್ತಿದ್ದರು. ರಾಜಕೀಯ ಮತ್ತು ಸಾಂಸ್ಕೃತಿಕ ವಾಗಿಯೂ ಹಿಂದುಳಿದಿದ್ದರು. ಕಾಂಗ್ರೆಸ್‌ನ ಮುಖ್ಯಮಂತ್ರಿ ದೇವರಾಜ ಅರಸರು 1974ರಲ್ಲಿ ಜಾರಿಗೊಳಿಸಿದ ಕಾಯ್ದೆಯು ಗೇಣಿದಾರರ ಬದುಕಿನ ದಿಕ್ಕನ್ನೇ ಬದಲಿಸಿತು. ಈ ಕಾಯ್ದೆ ಜಾರಿಗೊಳಿಸುವಲ್ಲಿ ಬಿವಿ ಕಕ್ಕಿಲ್ಲಾಯ ಸಹಿತ ಕಮ್ಯುನಿಸ್ಟ್ ಪಕ್ಷದ ಹೋರಾಟ ಅವಿಸ್ಮರಣೀಯ. ವಿಪರ್ಯಾಸವೇನೆಂದರೆ, ಭೂ ಸುಧಾರಣೆ ಕಾಯ್ದೆಯ ಫಲಾನುಭವಿಗಳ ಮಕ್ಕಳು ಬಿಜೆಪಿ ಸಹಿತ ಬಲಪಂಥೀಯ ವಿಚಾರಧಾರೆಯ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಚಂದ್ರಪೂಜಾರಿ ನುಡಿದರು.

ಭೂ ಸುಧಾರಣೆ ಕಾಯ್ದೆಯ ಬಳಿಕ ಬಿಲ್ಲವರು ರಾಜಕೀಯವಾಗಿಯೂ ಸ್ಥಾನಮಾನ ಪಡೆದುಕೊಂಡರು. ಅಂದರೆ ಕಾಂಗ್ರೆಸ್ ಪಕ್ಷದ ಮೂಲಕ ಸಂಸದರಾಗಿ, ಶಾಸಕರಾಗಿಯೂ ಗುರುತಿಸಲ್ಪಟ್ಟರು. ಆ ಬಳಿಕ ಕೋಮುರಾಜಕಾರಣದ ಹಾವಳಿಯಿಂದಾಗಿ ಸಿದ್ಧಾಂತ ಮತ್ತು ಕ್ಯಾಡರ್ ವ್ಯವಸ್ಥೆ ಇಲ್ಲದ ಹಾಗೂ ಚುನಾವಣೆ ಸಂದರ್ಭ ಮಾತ್ರ ಎಚ್ಚೆತ್ತುಕೊಳ್ಳುವ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಎದುರಿಸುವಲ್ಲಿ ವಿಫಲವಾದರೆ, ಎಡಪಕ್ಷವೂ ಸದ್ಯ ಬಿಜೆಪಿಯನ್ನು ಎದುರಿಸುವ ಸ್ಥಿತಿಯಲ್ಲಿಲ್ಲ ಎಂದು ಚಂದ್ರಪೂಜಾರಿ ಹೇಳಿದರು.

ಪಿವಿ ಲೋಕೇಶ್ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕರಾವಳಿಯಲ್ಲಿ ಕಾಂಗ್ರೆಸ್ ಸೋಲಿಗೆ ತ್ರಿಮೂರ್ತಿಗಳೇ ಕಾರಣ

ಕರಾವಳಿಯ ದ.ಕ. ಮತ್ತು ಉಡುಪಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಆಸ್ಕರ್ ಫೆರ್ನಾಂಡೀಸ್ ಅವರೇ ಕಾರಣರು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

‘ಕರ್ನಾಟಕದಲ್ಲಿ ಭೂ ಸುಧಾರಣೆ: ಎಲ್ಲಿಂದ ಎಲ್ಲಿಗೆ ?’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು ಭೂ ಸುಧಾರಣೆ ಕಾಯ್ದೆಯು ದೇವರಾಜ ಅರಸರ ಅವಸರದ ಕ್ರಾಂತಿಕಾರಿ ತೀರ್ಮಾನವಾಗಿತ್ತು. ಹಿಂದುಳಿದ ವರ್ಗದವರಿಗೆ ರಾಜಕೀಯ ಸ್ಥಾನಮಾನ ನೀಡುವುದಕ್ಕಾಗಿ ಅವರು ಪೂಜಾರಿಯಂತಹವರಿಗೆ ಟಿಕೆಟ್ ಕೊಡಿಸಿ ಬೆಳೆಸಿದರು. ಆದರೆ ಕರಾವಳಿಯ ಈ ಮೂವರು ಕಾಂಗ್ರೆಸ್ ನಾಯಕರು ಎಂದಿಗೂ ಕೂಡ ಭೂ ಸುಧಾರಣೆಯ ಕಾಯ್ದೆ ಜಾರಿಗೊಳ್ಳುವಲ್ಲಿ ದೇವರಾಜ ಅರಸು ಅವರ ಪಾತ್ರದ ಬಗ್ಗೆ ಹೇಳಿಕೊಳ್ಳಲಿಲ್ಲ. ಆ ಬಳಿಕದ ಕೋಮು ರಾಜಕಾರಣವು ಭೂ ಸುಧಾರಣೆಯ ಫಲಾನುಭವಿಗಳ ಕುಟುಂಬಸ್ಥರನ್ನೂ ಬಿಜೆಪಿಯತ್ತ ವಾಲುವಂತೆ ಮಾಡಿತು. ಪೂಜಾರಿ, ಮೊಯ್ಲಿ, ಆಸ್ಕರ್ ಫೆರ್ನಾಂಡೀಸ್ ವಾಸ್ತವ ಸ್ಥಿತಿಯನ್ನು ಯುವ ಪೀಳಿಗೆಯ ಮುಂದೆ ಆವಾಗಲೆ ಇಟ್ಟಿದ್ದರೆ ಇಂದು ಈ ಕಾಯ್ದೆಯ ಫಲಾನುಭವಿಗಳ ಮಕ್ಕಳು ಕೇಸರಿ ಪಟ್ಟಿ ಕಟ್ಟಿಕೊಳ್ಳುತ್ತಿರಲಿಲ್ಲ ಎಂದರು.

ಕರಾವಳಿಯಲ್ಲಿ ಭೂ ಸುಧಾರಣೆಗೆ ಸಂಬಂಧಿಸಿ ದೊಡ್ಡಮಟ್ಟದ ಹೋರಾಟ ಅಥವಾ ಚಳುವಳಿಯೂ ನಡೆದಿಲ್ಲ. ಬಿಲ್ಲವರು ಹೆಚ್ಚಿನ ಪ್ರಮಾಣದಲ್ಲಿ ಭೂಮಿಯನ್ನು ಪಡೆದುಕೊಂಡರೂ ಕೂಡ ಲಾಭದಾಯಕವಲ್ಲದ ಕೃಷಿ ಚಟುವಟಿಕೆಯು ಅವರ ಬೆಳವಣಿಗೆಗೆ ತೊಡಕಾಯಿತು. ಹಾಗಾಗಿ ಬಿಲ್ಲವ ಸಮುದಾಯದ ಯುವಕರು ಆರ್ಥಿಕ ಸುಧಾರಣೆಗಾಗಿ ಮುಂಬೈ ಮತ್ತು ಗಲ್ಫ್ ರಾಷ್ಟ್ರಗಳತ್ತ ಮುಖ ಮಾಡುವಂತಾಯಿತು ಎಂದು ದಿನೇಶ್ ಅಮೀನ್ ಮಟ್ಟು ನುಡಿದರು.

ಕಮ್ಯುನಿಸ್ಟರು ಒಂದಾಗದ ನೋವು ಬಿವಿ ಕಕ್ಕಿಲ್ಲಾಯರಿಗಿತ್ತು: ಸಿದ್ದನಗೌಡ ಪಾಟೀಲ್

ಕಮ್ಯುನಿಸ್ಟರ ವಿಭಜನೆಯು ಪಕ್ಷಕ್ಕೆ ಮಾತ್ರವಲ್ಲ ಕಾರ್ಮಿಕ ವರ್ಗಕ್ಕೂ ಆದ ಅನ್ಯಾಯವಾಗಿದೆ. ಹಾಗಾಗಿ ಕಮ್ಯುನಿಸ್ಟರು ಒಂದಾಗಬೇಕು ಎಂದು ಬಿವಿ ಕಕ್ಕಿಲ್ಲಾಯ ಆಶಿಸಿದ್ದರು. ಆ ನೋವು ಅವರಿಗೆ ಬಹುವಾಗಿ ಕಾಡಿತ್ತು ಆದರೆ, ಅವರು ಕೊನೆಯುಸಿರೆಳೆಯುವವರೆಗೂ ಅದು ಸಾಧ್ಯವಾಗಲಿಲ್ಲ ಎಂದು ಹೊಸತು ಪತ್ರಿಕೆಯ ಸಂಪಾದಕ ಸಿದ್ದನಗೌಡ ಪಾಟೀಲ್ ನುಡಿದರು.

‘ಬಿವಿ ಕಕ್ಕಿಲ್ಲಾಯ: ಮಲಬಾರಿನಿಂದ ಕರ್ನಾಟಕ ವಿಧಾನಸಭೆಯವರೆಗೆ’ ಕುರಿತು ಮಾತನಾಡಿದ ಅವರು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಬಿವಿ ಕಕ್ಕಿಲ್ಲಾಯ 1940ರಲ್ಲಿ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಮಾರು ಹೋದರು. ಅಷ್ಟೇ ಅಲ್ಲ, ತನ್ನ ಜುಟ್ಟು ಕತ್ತಿರಿಸಿ, ಜನಿವಾರ ಕಿತ್ತೆಸೆದು ತನ್ನ ವೈಚಾರಿಕ ಮತ್ತು ವೈಜ್ಞಾನಿಕ ಲೋಕಕ್ಕೆ ಪ್ರವೇಶ ಪಡೆದು ತನ್ನನ್ನು ತಾನೇ ಗೆಲ್ಲುವ ಪ್ರಕ್ರಿಯೆಗೆ ಮುಂದಾದರು. ಸಾಕಷ್ಟು ಹೋರಾಟಗಳಲ್ಲಿ ಭಾಗಿಯಾದ ಬಳಿಕವೂ ಬಿವಿ ಕಕ್ಕಿಲ್ಲಾಯ ತಾನಿನ್ನೂ ಕಮ್ಯುನಿಸ್ಟ್ ಆಗಿಲ್ಲ, ಆಗಲು ಪ್ರಯತ್ನಿಸುತ್ತಿದ್ದೇನೆ ಎಂದು ಆಗಾಗ ಹೇಳುತ್ತಿದ್ದರು. ಚಳುವಳಿಯ ಭಾಗವಾಗುತ್ತಲೇ ಮೇಲ್ವರ್ಗದ ಕಮ್ಯುನಿಸ್ಟರು ಸಂಕಷ್ಟದಲ್ಲಿರುತ್ತಾರೆ ಎನ್ನುತ್ತಿದ್ದರು. ಜೈಲುವಾಸದ ಬಳಿಕವಷ್ಟೇ ಅವರು ತಾನು ಪರಿಪೂರ್ಣ ಕಮ್ಯುನಿಸ್ಟ್ ಆದೆ ಎನ್ನುತ್ತಿದ್ದರು ಎಂದರು.

ರಾಜ್ಯಸಭೆ ಪ್ರವೇಶಿಸಿದ ಮೊತ್ತಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗದ್ದ ಬಿವಿ ಕಕ್ಕಿಲ್ಲಾಯ ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿ ಪಂಡಿತ್ ಜವಾಹರಲಾಲ್ ನೆಹರೂ ಅವರ ನಿಲುವನ್ನು ವಿರೋಧಿಸಿ ದಿಟ್ಟತನದಿಂದ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರು. ಬಿವಿ ಕಕ್ಕಿಲ್ಲಾಯರ ಚಿಂತನೆ, ದೂರದೃಷ್ಟಿತ್ವವನ್ನು ಗಮನಿಸಿದ ಅರಸು ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸುವ ಸಂದರ್ಭ ಕಕ್ಕಿಲ್ಲಾಯರ ಸಲಹೆಗಳನ್ನು ಪಡೆಯಲು ಹಿಂಜರಿಯುತ್ತಿರಲಿಲ್ಲ ಎಂದ ಸಿದ್ದನಗೌಡ ಪಾಟೀಲ್, ಕಾಸರಗೋಡು ಕರ್ನಾಟಕಕ್ಕೆ ಸೇರಿಲ್ಲ ಎಂಬ ಕೊರಗು ಮತ್ತು ಮಂಗಳೂರು ಕೋಮುರಾಜಕಾರಣಕ್ಕೆ ಬಲಿಯಾಗುತ್ತಿರುವ ಬಗ್ಗೆಯೂ ಕಕ್ಕಿಲ್ಲಾಯರು ನೊಂದಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News