ಕರಾವಳಿಯಲ್ಲಿ ಮೀನುಗಾರಿಕೆಗೆ ಚಾಲನೆ: ಕಡಲ ತೀರದಲ್ಲಿ ಸಾಮೂಹಿಕ ಸಮುದ್ರ ಪೂಜೆ

Update: 2019-08-15 14:36 GMT

ಮಂಗಳೂರು, ಆ.15: ನದಿಗಳು ಸಂಗಮವಾಗಿ ಸಮುದ್ರ ಸೇರುತ್ತವೆ. ಅಂತಹ ಸಮುದ್ರರಾಜನಿಗೆ ಹಾಲೆರೆಯುವುದು ವಾಡಿಕೆ. ಸಮುದ್ರದಲ್ಲಿ ಜೀವನ ನಿರ್ವಹಿಸುವ ಕೆಲಸಗಾರರಿಗೆ ಸಮುದ್ರ ರಾಜನ ಅನುಗ್ರಹವಿರಲಿ ಎಂದು ಬೇಡಿಕೊಂಡು ಸಮುದ್ರ ತೀರದಲ್ಲಿ ಗುರುವಾರ ಸಾಮೂಹಿಕ ಸಮುದ್ರ ಪೂಜೆ ನೆರವೇರಿಸಲಾಯಿತು.

ಮಂಗಳೂರು ಏಳು ಪಟ್ಣಮೊಗವೀರ ಸಂಯುಕ್ತ ಮಹಾಸಭಾ ವತಿಯಿಂದ ಜರುಗಿದ ಸಾಮೂಹಿಕ ಸಮುದ್ರ ಪೂಜೆಯಲ್ಲಿ ಸಮುದ್ರಕ್ಕೆ ಹಾಲೆರೆದು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕದ್ರಿ ಸುವರ್ಣ ಕದಳೀಮಠ ಮಠಾಧಿಪತಿ ರಾಜಯೋಗಿ ನಿರ್ಮಲನಾಥ ಮಹಾರಾಜ್ ಶ್ರೀ, ತಂದೆ-ತಾಯಿಯ ಅನುಗ್ರಹವಿಲ್ಲದೇ ಯಾವ ಮಕ್ಕಳೂ ಏಳಿಗೆ ಪಡೆಯಲು ಸಾಧ್ಯವಿಲ್ಲ. ತಂದೆ-ತಾಯಿಯನ್ನು ಸುಖದಿಂದ ಯಾರು ನೋಡುತ್ತಾರೋ ಅಂಥವರು ಜೀವನದಲ್ಲಿ ಸುಖಿಯಾಗಿರುತ್ತಾರೆ ಎಂದು ನುಡಿದರು.

ಕಾಂಚನ್ ಮೋಟಾರ್ಸ್‌ನ ಮಾಲಕ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಮೊಗವೀರ ಸಮುದಾಯ ಅಭಿವೃದ್ಧಿ ಹೊಂದಬೇಕು ಎಂದು ಸಮುದ್ರ ಪೂಜೆ ನಡೆಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಉಪಾಧ್ಯಕ್ಷ ದೇವದಾಸ ಬೋಳೂರು, ಮತ್ಸೋದ್ಯಮಿ ಹಾಗೂ ಸಮಾಜ ಸೇವಕ ಲೋಕನಾಥ ಪುತ್ರನ್ ಪಡುಹೊಯಿಗೆ, ಮಾಧವ ಸಾಲ್ಯಾನ್, ಅಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಬೋಳೂರು ಗ್ರಾಮದ ಗುರಿಕಾರ ತಾರನಾಥ ಪುತ್ರನ್, ಬೊಕ್ಕಪಟ್ಣ ಗ್ರಾಮ ಗುರಿಕಾರ ನಾರಾಯಣ ಕೋಟ್ಯಾನ್, ಕುದ್ರೋಳಿ 3ನೇ ಗ್ರಾಮದ ಗುರಿಕಾರಪ್ರಕಾಶ್ ಕರ್ಕೇರ, ಕುದ್ರೋಳಿ 2ನೇ ಗ್ರಾಮದ ಮೋಹನ್ ದಾಸ್ ಸುವರ್ಣ, ಬೆಂಗ್ರೆ ಜನಾರ್ದನ ಸುವರ್ಣ, ಮೋಹನ್ ಗುರಿಕಾರ ಪಡುಹೊಯಿಗೆ, ಬಾಲಕೃಷ್ಣ ತಿಂಗಳಾಯ ಹೊಯಿಗೆ ಬಜಾರ್, ನಾರಾಯಣ ಗುರಿಕಾರ ಬೋಳಾರು, ಶರತ್ ತಿಂಗಾಳಾಯ ಗುರಿಕಾರ ಜಪ್ಪು ಉಪಸ್ಥಿತರಿದ್ದರು.

ರಾಘವ ಬೋಳೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ಯಾಮಸುಂದರ್ ಕಾಂಚನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News