ಕೆಲಸ ಕಳೆದುಕೊಳ್ಳುವ ಭಯ: ಬಿಜೆಪಿ ಮುಖಂಡನ ಪುತ್ರ ಆತ್ಮಹತ್ಯೆ

Update: 2019-08-17 10:28 GMT

ಜಮಶೇಡ್ಪುರ, ಆ.17: ಇಲ್ಲಿನ ಬಾಧಿರಿ ಪ್ರಗತಿ ನಗರದ ಬಿಜೆಪಿ ಐಟಿ ಸೆಲ್ ಹಾಗು ಕ್ಷೇತ್ರ ಮಾಧ್ಯಮ ಪ್ರಭಾರಿ ಕುಮಾರ್ ವಿಶ್ವಜಿತ್ ಅವರ ಪುತ್ರ ಆಶಿಶ್ ಕುಮಾರ್ ಅವರು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಾರ್ಖಂಡ್ ನ ಹಿಂದಿ ಪತ್ರಿಕೆ ‘ಪ್ರಭಾತ್ ಖಬರ್’ ವರದಿ ಮಾಡಿದೆ.

ಆಶಿಶ್ ಕುಮಾರ್ ಇಲ್ಲಿನ ಕಂಪೆನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದರು. ಕಳೆದ ಕೆಲವು ದಿನಗಳಿಂದ ಉದ್ಯೋಗ ಕಳೆದುಕೊಳ್ಳುವ ಒತ್ತಡದಲ್ಲಿದ್ದ ಆಶಿಶ್ ಶುಕ್ರವಾರ ಸಂಜೆ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಬಾಗಿಲು ಬಡಿದಾಗ ತೆಗೆಯದಿದ್ದಾಗ ಜನ ಸೇರಿ ಕಿಟಕಿ ಮೂಲಕ ನೋಡಿದಾಗ ಅವರು ಫ್ಯಾನಿನಲ್ಲಿ ನೇತಾಡುತ್ತಿದ್ದುದು ಕಂಡು ಬಂದಿದೆ.

ವಿಷಯ ತಿಳಿದು ಮನೆಗೆ ಬಂದ ಆಶಿಶ್ ತಂದೆ ಪುತ್ರನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಆಶಿಶ್ ತನ್ನ ಏಕೈಕ ಪುತ್ರ ಎಂದು ಹೇಳಿರುವ ವಿಶ್ವಜಿತ್, ಆತ ಕಂಪೆನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ. ಆತನ ಪತ್ನಿ ಸ್ಥಳೀಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿ ಎಂದು ತಿಳಿಸಿದ್ದಾರೆ. ಆಶಿಶ್ ಕೆಲಸ ಮಾಡುವ ಕಂಪೆನಿಯಲ್ಲಿ ಟಾಟಾ ಮೋಟರ್ಸ್ ಗೆ ಸರಬರಾಜು ಆಗುವ ಕೆಲವು ಬಿಡಿಭಾಗಗಳು ತಯಾರಾಗುತ್ತವೆ. ವಾರದ ಹಿಂದೆ ನನ್ನ ಕೆಲಸ ಹೋಗುವ ಸಾಧ್ಯತೆ ಇದೆ. ಟಾಟಾ ಮೋಟರ್ಸ್ ಕೆಲವು ವಿಭಾಗಗಳನ್ನು ಮುಚ್ಚುತ್ತಿದೆ. ಇದರ ಪರಿಣಾಮ ನಮ್ಮ ಕಂಪೆನಿ ಮೇಲೂ ಆಗಲಿದೆ ಎಂದು ಮಗ ತನ್ನಲ್ಲಿ ಹೇಳಿದ್ದ ಎಂದು ಅವರು ತಿಳಿಸಿದ್ದಾರೆ. ತಾನು ಆತನಿಗೆ ಧೈರ್ಯ ತುಂಬಿದ್ದರೂ ಆತ ಬಹಳ ಚಿಂತಿತನಾಗಿದ್ದ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News