ವ್ಯಕ್ತಿಯನ್ನು ಉಗ್ರ ಎಂದು ಘೋಷಿಸುವ ಕಾನೂನಿನ ವಿರುದ್ಧ ದಾವೆ
Update: 2019-08-17 17:27 GMT
ಹೊಸದಿಲ್ಲಿ, ಆ.17: ಕೇಂದ್ರ ಸರಕಾರಕ್ಕೆ ವ್ಯಕ್ತಿಯನ್ನು ಉಗ್ರ ಎಂದು ಘೋಷಿಸುವ ಅಧಿಕಾರ ನೀಡುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಕಾಯ್ದೆ, 2019 (ಯುಎಪಿಎ)ಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಮನವಿ ಮಾಡಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಗಿದೆ.
ದಿಲ್ಲಿ ನಿವಾಸಿ ಸಜಲ್ ಅವಸ್ತಿ ಸಲ್ಲಿಸಿರುವ ಪಿಐಎಲ್ನಲ್ಲಿ ಯುಎಪಿಎ, ಭಾರತೀಯ ಸಂವಿಧಾನ 21ನೇ ವಿಧಿ(ಜೀವನದ ಹಕ್ಕು), 19ನೇ ವಿಧಿ (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಮತ್ತು 14ನೇ ವಿಧಿ (ಸಮಾನತೆಯ ಹಕ್ಕು)ಯಡಿ ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಘೋಷಿಸುವಂತೆಯೂ ಮನವಿ ಮಾಡಿದ್ದಾರೆ. ಯುಎಪಿಎಗೆ ಇತ್ತೀಚೆಗೆ ಮಾಡಲಾಗಿರುವ ತಿದ್ದುಪಡಿಯಲ್ಲಿ ವ್ಯಕ್ತಿಯನ್ನು ಉಗ್ರನೆಂದು ಘೋಷಿಸುವ ಅವಕಾಶವನ್ನು ನೀಡಲಾಗಿದೆ.