ಪ್ರವಾಹ ಪೀಡಿತ ಪ್ರದೇಶಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ನಿಯೋಗ ಭೇಟಿ

Update: 2019-08-18 10:39 GMT

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ನಿಯೋಗವು ಭೇಟಿ ನೀಡಿದ್ದು, ನೆರೆ ಸಂತ್ರಸ್ತರ ಅವಹಾಲುಗಳನ್ನು ಸ್ವೀಕರಿಸಿ ಅವರಿಗೆ ಸಾಂತ್ವನ ನೀಡಿತು. ಈ ಸಂದರ್ಭದಲ್ಲಿ ನಿಯೋಗವು ಸಂತ್ರಸ್ತರಿಗೆ ತುರ್ತು ಪರಿಹಾರ ನೀಡಿ ಧೈರ್ಯ ತುಂಬಿತು.

ಜಮಾಅತ್‍ನ ಸೇವಾ ವಿಭಾಗ ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ತಂಡದ ಸದಸ್ಯರು ಮೊದಲ ದಿನದಿಂದಲೇ ಪ್ರವಾಹ ಪೀಡಿತರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ನೆರೆ ಸಂತ್ರಸ್ತರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು, ಬಟ್ಟೆಬರೆ, ಆಹಾರ ಸಾವiಗ್ರಿಗಳು ಹಾಗೂ ಇನ್ನಿತರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದರು. ಮಾತ್ರವಲ್ಲದೆ ಪ್ರವಾಹದಿಂದ ಕೆಸರುಮಯಗೊಂಡ ನೂರಾರು ಮನೆಗಳನ್ನು ಕಾರ್ಯಕರ್ತರು ಶುಚಿಗೊಳಿಸಿದರು.

ಪ್ರವಾಹದಿಂದ ಹಾನಿಗೊಳಗೊಂಡವರ ಅಗತ್ಯ ದಾಖಲೆ ಪತ್ರಗಳನ್ನು ಸರಿಪಡಿಸಲು, ಕಾನೂನು ಸಲಹೆ ನೀಡಲು, ಸರಕಾರದಿಂದ, ದಾನಿಗಳಿಂದ, ಸ್ವಯಂ ಸೇವಾ ಸಂಸ್ಥೆಗಳಿಂದ ದೊರೆಯುವ ಪರಿಹಾರವನ್ನು ತಲುಪಿಸುವ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕೊಡಗಿನ ಸಿದ್ಧಾಪುರ, ಬೆಳಗಾವಿಯ ರಾಮದುರ್ಗ, ಬಾಗಲಕೋಟೆಯ ಬಾದಾಮಿಯಲ್ಲಿ ‘ರಿಲೀಫ್ ಸೆಲ್‍ಗಳನ್ನು’ ತೆರೆಯಲಾಯಿತು. ಇಂತಹ ಸೆಲ್‍ಗಳನ್ನು ರಾಜ್ಯದ ಇನ್ನಿತರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆದಷ್ಟು ಬೇಗನೆ ತೆರೆಯಲಾಗುವುದು ಎಂದು ಎಚ್.ಆರ್.ಎಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮರಕಡ ಹೇಳಿದರು.

ಪ್ರವಾಹದಿಂದ ಮನೆ ಕಳಕೊಂಡ ಸಂತ್ರಸ್ತರಿಗೆ ಸರಕಾರವು ಆದಷ್ಟು ಬೇಗನೆ ಮನೆ ನಿರ್ಮಿಸಿಕೊಟ್ಟು ಅವರಲ್ಲಿ ಧೈರ್ಯ ತುಂಬ ಬೇಕೆಂದು ನಿಯೋಗವು ಸರಕಾರವನ್ನು ಒತ್ತಾಯ ಪಡಿಸುತ್ತದೆ. ಇಂತಹ ಪ್ರವಾಹದಿಂದ ಮುಂದೆ ಪ್ರಾಣಹಾನಿ ಮತ್ತು ನಾಶ ನಷ್ಟಗಳು ಮರುಕಳಿಸದಂತೆ ಅಧ್ಯಯನ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರಕಾರಕ್ಕೆ ನಿಯೋಗವು ಆಗ್ರಹಿಸುತ್ತದೆ ಎಂದು ತಿಳಿಸಿದೆ.

ನಿಯೋಗದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಉಪಾಧ್ಯಕ್ಷರಾದ ಮುಹಮ್ಮದ್ ಯೂಸುಫ್ ಕನ್ನಿ, ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News