ಶನಿದೇವರು ಶೀಘ್ರ ಫಲಕಾರಕ: ಭಾಸ್ಕರ ರೈ ಕುಕ್ಕುವಳ್ಳಿ

Update: 2019-08-19 18:59 GMT

ನಾಸಿಕ್: ನವಗ್ರಹಗಳಲ್ಲಿ ಅತ್ಯಂತ ಪ್ರಬಲನಾದ ಶನಿ ದೇವರ ಅನುಗ್ರಹ ಮನುಕುಲಕ್ಕೆ ಅಗತ್ಯ. ಜಾತಕದಲ್ಲುಂಟಾಗುವ ದೋಷ-ಕಂಟಕಗಳಿಗೆ ಸಾಮೂಹಿಕ ಶನಿ ಪೂಜೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಏಕೆಂದರೆ ಶನಿದೇವರು ಶೀಘ್ರ ಫಲಕಾರಕ ಎಂದು ಲೇಖಕ, ಪ್ರಾಧ್ಯಾಪಕ ಮತ್ತು ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.

ಶ್ರೀ ಶನೀಶ್ವರ ಪೂಜಾ ಸಮಿತಿ ನಾಸಿಕ್ ಇವರ ವತಿಯಿಂದ ನಗರದ ಮಸಾಲಾ ಝೋನ್ ಸಭಾಮಂಟಪದಲ್ಲಿ ಇತ್ತೀಚಿಗೆ ನಡೆದ ಸಾರ್ವಜನಿಕ ಶನಿ ಪೂಜೆಯಲ್ಲಿ ದೀಪೋಜ್ವಲನೆ ಮಾಡಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ಸಂಯೋಜನೆಯಲ್ಲಿ 'ಶನಿಕಥೆ'ಯನ್ನು ಯಕ್ಷಗಾನ ತಾಳಮದ್ದಳೆ ಮೂಲಕ ಪ್ರಸ್ತುತಪಡಿಸಲಾಯಿತು.

'ಶ್ರೀ ಶನೀಶ್ವರ ಮಹಾತ್ಮೆ' ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ ಆಳ್ವ ತಲಪಾಡಿ, ಚೆಂಡೆಮದ್ದಳೆಯಲ್ಲಿ ಪ್ರಶಾಂತ ಶೆಟ್ಟಿ ವಗೆನಾಡು ಮತ್ತು ರೋಹಿತ್ ಉಚ್ಚಿಲ್ ಭಾಗವಹಿಸಿದರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ದಿನೇಶ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ ಮತ್ತು ಪ್ರಸಾದ ಸವಣೂರು ಅರ್ಥಧಾರಿಗಳಾಗಿದ್ದರು.

ಅಜೆಕಾರು ಕಲಾಭಿಮಾನಿ ಬಳಗದ ಮುಂಬೈ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ತಾಳಮದ್ದಳೆ ಯಲ್ಲಿ ಭಾಗವಹಿಸಿದ ಎಲ್ಲ ಕಲಾವಿದರನ್ನು ಪೂಜಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ರಮೇಶ ಕರ್ಕೇರ ಮತ್ತು ಜಯರಾಮ ಪೂಜಾರಿ ಪೂಜಾವಿಧಿಗಳನ್ನು ನಡೆಸಿಕೊಟ್ಟರು. ಮಕ್ಕಳು ಮಹಿಳೆಯರು ಸೇರಿದಂತೆ ಆಸ್ತಿಕರು ಬಹುಸಂಖ್ಯೆಯಲ್ಲಿ ಸಾಮೂಹಿಕ ಶನಿ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಶನೈಶ್ಚರ ದೇವರ ಪ್ರಸಾದ ಸ್ವೀಕರಿಸಿದರು. ರಾಜಶೇಖರ ಉಚ್ಚಿಲ್, ರವಿ ಶೆಟ್ಟಿ, ಶಶಿ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಸತೀಶ್ ಶೆಟ್ಟಿ ಮೊದಲಾದವರು ವ್ಯವಸ್ಥೆಯಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News