ಹತ್ಯೆಯತ್ನ ಪ್ರಕರಣ: ಚೋಟಾ ರಾಜನ್ ತಪ್ಪಿತಸ್ಥ
Update: 2019-08-20 16:41 GMT
ಮುಂಬೈ, ಆ.20: 2012ರಲ್ಲಿ ಮುಂಬೈ ಮೂಲದ ಹೊಟೇಲ್ ಉದ್ಯಮಿ ದಾಖಲಿಸಿದ್ದ ಹತ್ಯಾಯತ್ನ ಮತ್ತು ಸುಲಿಗೆ ಪ್ರಕರಣದಲ್ಲಿ ಭೂಗತ ಪಾತಕಿ ಚೋಟಾ ರಾಜನ್ ಹಾಗೂ ಇತರ ಐವರು ತಪ್ಪಿತಸ್ಥರು ಎಂದು ಮುಂಬೈಯ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಆರೋಪಿಗಳನ್ನು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆದ ವಿವಿಧ ಸೆಕ್ಷನ್ಗಳಡಿಯಲ್ಲಿ ತಪ್ಪಿತಸ್ಥರು ಎಂದು ವಿಶೇಷ ನ್ಯಾಯಾಲಯ ನ್ಯಾಯಾಧೀಶ ಎ.ಟಿ ವಾಂಖೆಡೆ ತೀರ್ಪು ನೀಡಿದ್ದಾರೆ. ಹೊಟೇಲ್ ಉದ್ಯಮಿ ಬಿ.ಆರ್ ಶೆಟ್ಟಿ ಅಂಧೇರಿ ಉಪನಗರದಲ್ಲಿ ತನ್ನ ಸ್ನೇಹಿತನನ್ನು ಭೇಟಿಯಾಗಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. 2015ರಲ್ಲಿ ಇಂಡೊನೇಶಿಯದಲ್ಲಿ ಬಂಧಿಸಲ್ಪಟ್ಟು ನಂತರ ಭಾರತಕ್ಕೆ ಗಡಿಪಾರುಗೊಳಿಸಲ್ಪಟ್ಟ ಚೋಟ ರಾಜನ್ ಸದ್ಯ ದಿಲ್ಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾನೆ.