ದರೋಡೆಗೆ ಸಂಚು ರೂಪಿಸಿದ ಪ್ರಕರಣ: ಪೀಟರ್ ವಶಕ್ಕೆ ಪಡೆಯಲು ಸಿಬಿಐ ತಂಡ ಮಂಗಳೂರಿಗೆ ?

Update: 2019-08-20 18:36 GMT

ಮಂಗಳೂರು : ಕೇಂದ್ರ ಸರಕಾರದ ತನಿಖಾ ಸಂಸ್ಥೆ ಎಂದು ಹೆಸರು ಬಳಸಿ ದರೋಡೆಗೆ ಸಂಚು ರೂಪಿಸಿದ ರೂವಾರಿ ಟಿ. ಸ್ಯಾಮ್ ಪೀಟರ್(53)ನನ್ನು ತನ್ನ ವಶಕ್ಕೆ ಪಡೆಯಲು ಆ. 21ರಂದು ಸಿಬಿಐ ತಂಡ ನಗರಕ್ಕೆ ಆಗಮಿಸುವ ಸಾಧ್ಯತೆಯಿದೆ.

ದೇಶದ ನಾನಾ ಕಡೆ ಸ್ಯಾಮ್ ಪೀಟರ್ ಮೇಲೆ ಪ್ರಕರಣ ದಾಖಲಾಗಿದ್ದು, ಈತನನ್ನು ‘ಮೋಸ್ಟ್ ವಾಂಟೆಡ್ ಕ್ರಿಮಿನಲ್’ ಎಂದು ಘೋಷಿಸಿ ಈತನ ಬಂಧನಕ್ಕೆ ಸಿಸಿಬಿ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಈತ ವಿದೇಶಕ್ಕೆ ಹಾರಿರಬಹುದೆಂಬ ಸಂಶಯ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಹಲವು ಸಮಯದಿಂದ ಶೋಧ ಕಾರ್ಯವೂ ನಡೆದಿತ್ತು.

ಆದರೆ ಆ.16ರಂದು ಪಂಪ್‌ವೆಲ್ ಬಳಿ ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದಾಗ ನಗರ ಪೊಲೀಸರು ಲಾಡ್ಜ್‌ನಲ್ಲಿ ಬಂಧಿಸಿದ್ದರು. ಈ ಮೂಲಕ ಅಂತಾರಾಜ್ಯ ಮಟ್ಟದ ಲೂಟಿ ಗ್ಯಾಂಗೊಂದನ್ನು ನಗರ ಪೊಲೀಸರು ಪತ್ತೆಹಚ್ಚಿ ಮಹತ್ವದ ಸಾಧನೆ ಮಾಡಿದ್ದರು.

ಪೀಟರ್ ಬಂಧನ ವಿಷಯ ತಿಳಿದ ಸಿಸಿಬಿ ತಂಡ ಗುರುವಾರ ನಗರಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲೂ ಈತ ನಿರಂತರ ಲೂಟಿ ಚಟುವಟಿಕೆಯಲ್ಲಿ ತೊಡಗಿಸಿ, ತಲೆಮರೆಸಿಕೊಂಡ ಕಾರಣ ಮಹಾರಾಷ್ಟ್ರ ಸರಕಾರ ‘ರಾಜ್ಯದ ಘೋಷಿತ ಅಪರಾಧಿ’ ಎಂದು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News