ಆ. 27: ಇಸ್ರೇಲ್ ಅಧ್ಯಯನ ಪ್ರವಾಸ ಕೈಗೊಂಡ ಎಸ್ ಸಿ ಡಿಸಿಸಿ ಪದಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ

Update: 2019-08-22 11:46 GMT

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ವತಿಯಿಂದ ಇತ್ತೀಚೆಗೆ ಇಸ್ರೇಲ್ ಗೆ ಅಧ್ಯಯನ ಪ್ರವಾಸ ಕೈಗೊಂಡ ಕೃಷಿ ಮತ್ತು ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳೊಂದಿಗೆ ಆ. 27ರಂದು ಸಂವಾದ ಕಾರ್ಯಕ್ರಮ ಮತ್ತು ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಅಭಿವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೃಷಿ ಮತ್ತು ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳ ವಿದೇಶ ಅಧ್ಯಯನ ಪ್ರವಾಸ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಹಕಾರಿ ರಂಗದ ಮೂಲಕ ಕೃಷಿಕರ ಅಧ್ಯಯನ ಪ್ರವಾಸ ನಡೆದಿದೆ. ಈ ರೀತಿಯ ಪರಿಕಲ್ಪನೆ ಬ್ಯಾಂಕಿ ಅಧ್ಯಕ್ಷರ ಕ್ರಾಂತಿಕಾರಿ ನಿಲುವು ಮತ್ತು ಪ್ರಯತ್ನ ಇದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿವಂದನೆಯನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಇಸ್ರೆಲ್‌ನ ಕನಿಷ್ಠ ನೀರು ಬಳಕೆಯ ಕೃಷಿ ಪದ್ಧತಿ, ಹನಿ ನೀರಾವರಿ, ರಾಷ್ಟ್ರದ ಕೃಷಿ ರಂಗದ ಅಧ್ಯಯನ ದೊಂದಿಗೆ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡು ದೇಶದ ಅಭಿವೃದ್ಧಿ ಹೊಂದಿದ ಸುಧಾರಿತ ಕೃಷಿಯನ್ನು ಅನುಸರಿಸುವುದು ತಮ್ಮ ಮುಖ್ಯ ಗುರಿಯಾಗಿದೆ. ಇಸ್ರೇಲ್ ಪ್ರವಾಸದ ಅನುಭವವನ್ನು ಸಹಕಾರಿಗಳ ಮೂಲಕ ಇತರ ರೈತರ ಜೊತೆ ಹಂಚಿಕೊಳ್ಳಲು ಆ.27ರಂದು ಬೆ.11ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾರಂಭವನ್ನು ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಭಾಗವಹಿಸಲಿರುವರು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ರಾಜಾರಾಮ ಭಟ್, ಶಶಿ ಕುಮಾರ್, ಸದಾಶಿವ ಉಳ್ಳಾಲ, ಬಂಟ್ವಾಳ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಬಂಟ್ವಾಳ ವರ್ತಕರ ಸಂಘದ ಅಧ್ಯಕ್ಷ ಸುಭಾಸ್ ಚಂದ್ರ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ, ಜನರಲ್ ಮ್ಯಾನೇಜರ್ ಗೋಪಾಲ ಕೃಷ್ಣ ಭಟ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News