ಕೊಂಕಣಿ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಒತ್ತಾಯ

Update: 2019-08-25 16:32 GMT

ಮಂಗಳೂರು, ಆ.25: ಭಾಷಾ ಅಲ್ಪಸಂಖ್ಯಾತರ ಸ್ಥಾನದಲ್ಲಿರುವ ಕೊಂಕಣಿ ಭಾಷಿಕ ಸಮುದಾಯ ಸರಕಾರಿ ಸೌಲಭ್ಯಗಳಿಂದ ವಂಚನೆಗೊಳಗಾಗಿದ್ದು, ಶೀಘ್ರ ಕೇಂದ್ರ-ರಾಜ್ಯ ಸರಕಾರಗಳು ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಕೊಂಕಣಿ ಸಮುದಾಯದ ಮುಖಂಡ ಟಿ.ವಿ.ಮೋಹನ್‌ದಾಸ್ ಪೈ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಭಾಷಾ ಅಲ್ಪಸಂಖ್ಯಾತರಿಗೂ ಸರ್ಕಾರ ಎಲ್ಲ ರೀತಿಯ ಸವಲತ್ತು ನೀಡಬೇಕು ಎಂದು ಸಂವಿಧಾನ ಹೇಳಿದ್ದರೂ ಸರಕಾರದ ಇಚ್ಛಶಕ್ತಿಯ ಕೊರತೆಯಿಂದ ಹಿನ್ನೆಡೆಯಾಗಿದೆ.ಯಾವುದೇ ತಾರತಮ್ಯವಿಲ್ಲದೆ ಭಾಷಾ ಅಲ್ಪಸಂಖ್ಯಾತರಿಗೂ, ಧಾರ್ಮಿಕ ಅಲ್ಪ ಸಂಖ್ಯಾತರ ರೀತಿಯಲ್ಲಿ ಎಲ್ಲ ಹಕ್ಕು ಮತ್ತು ಸವಲತ್ತುಗಳು ಸಿಗುವಂತಾಗಬೇಕು. ಕೊಂಕಣಿ ಭಾಷಿಕ ಸಮುದಾಯದಲ್ಲಿರುವ ಮುಸ್ಲಿಮರು (ನವಾಯತರು) ಮತ್ತು ಕ್ರಿಶ್ಚಿಯನನ್ನರು ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನ ಮಾನದಡಿ ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಹಿಂದುಗಳಿಗೆ ಅನ್ಯಾಯವಾಗಿದೆ. ಭಾಷಾಅಲ್ಪ ಸಂಖ್ಯಾತರ ಸ್ಥಾನಮಾನ ಪಡೆಯುವುದು ನಮ್ಮ ಹಕ್ಕು. ಇದರಲ್ಲಿ ಚರ್ಚೆಗೆ ಅವಕಾಶವೇ ಇಲ್ಲ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರ ಈ ಬಾರಿ ಈವಿಚಾರನ್ನು ಕೈಗೆತ್ತಿಕೊಳ್ಳುವ ಭರವಸೆಯಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಭೇಟಿಯಾಗಿ ವಿವರಿಸಲಾಗುವುದು. ಸಮುದಾಯದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಇದರಿಂದ ಲಾಭ ಪಡೆಯುವಂತಾಗಬೇಕು ಎಂಬುದು ನಮ್ಮ ಆಶಯ. ಕೊಂಕಣಿ ಸಮುದಾಯ ಕೇವಲ 20 ಲಕ್ಷ ಮಂದಿಯನ್ನು ಹೊಂದಿರುವ ತುಳಿತಕ್ಕೊಳಗಾದ ಮತ್ತು ಹತ್ತಿಕ್ಕಲಾದ ಸಮುದಾಯ ಎಂದರು.

ಕೇಂದ್ರ ಹಾಗೂರಾಜ್ಯ ಸರ್ಕಾರಗಳು ದೇಶದಲ್ಲಿ 50ಸಾವಿರ ಕೋಟಿ ರೂ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಖರ್ಚುಮಾಡುತ್ತಿದೆ. 1ಲಕ್ಷ 50 ಸಾವಿರ ಕೋಟಿ ರೂ. ಪ.ಜಾ/ಪ.ಪಂ. ಹಾಗೂ ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಡುತ್ತದೆ. ಸರ್ಕಾರದ ಬಳಿ ಸಾಕಷ್ಟು ಮೊತ್ತವಿದೆ, ಸಂವಿಧಾನದ ಆಶಯದಂತೆ ಎಲ್ಲ ಸಮುದಾಯದವರು ತಮ್ಮ ಪಾಲು ಪಡೆಯಬೇಕು ಎನ್ನುವುದು ನಮ್ಮ ಆಶಯ ಎಂದು ಅವರು ಹೇಳಿದರು.

ವಿಶ್ವಕೊಂಕಣಿ ವಿದ್ಯಾರ್ಥಿವೇತನ ನಿಧಿ ಕಾರ್ಯಕ್ರಮದಲ್ಲಿ ಕೊಂಕಣಿ ಸಮುದಾಯದರಿಗೆ ಮಾತ್ರವಲ್ಲದೆ, ಯು-ಗೆಟ್‌ಇನ್ ಕಾರ್ಯಕ್ರಮದ ಮೂಲಕ ಸರ್ಕಾರಿ ಪ್ರ.ದರ್ಜೆ ಕಾಲೇಜುಗಳಲ್ಲಿರುವ ಇತರ ಸಮುದಾಯದ ಬಿಎ-ಬಿಕಾಂ ವಿದ್ಯಾರ್ಥಿಗಳಿಗೆ ಒಂದು ವಾರದ ಔದ್ಯೋಗಿಕ ತರಬೇತಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗ ಒದಗಿಸಲು ಉದ್ಯಮಿ ಉಲ್ಲಾಸ್ ಕಾಮತ್ ಮುಂದಾಗಿದ್ದಾರೆ. ವಸತಿಗಾಗಿ ಬೆಂಗಳೂರಿನಲ್ಲಿ ಉಚಿತ ಹಾಸ್ಟೆಲ್ ಒದಗಿಸಲೂ ಅವರು ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ಐಎಎಸ್ ತರಬೇತಿ ಪಡೆಯುತ್ತಿರುವ 3 ಮಂದಿಗೆ ಸ್ಕಾಲರ್‌ಷಿಪ್ ಒದಗಿಲಾಗುತ್ತಿದೆ. ವಿದೇಶಿ ಉದ್ಯಮಿ ಅಭಿಷೇಕ್ ನಕ್ಹಾಟೆ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ 1,500 ಮಂದಿಗೆ ಉಚಿತ ವಸತಿ ವ್ಯವಸ್ಥೆ ಮಾಡುವ ಜತೆಗೆ 20 ಸಾವಿರ ರೂ. ಕಾಲೇಜು ಫೀಸ್ ನೀಡಲು ಮುಂದಾಗಿದ್ದಾರೆ ಎಂದು ಪ್ರದೀಪ್ ಜಿ.ಪೈ ತಿಳಿಸಿದರು.

ವಿಶ್ವಕೊಂಕಣಿ ವಿದ್ಯಾರ್ಥಿವೇತನ ನಿಧಿ ಕಾರ್ಯದರ್ಶಿ ಪ್ರದೀಪ್ ಜಿ.ಪೈ, ಕ್ಷಮತಾ ಸಂಚಾಲಕ ಗಿರಿಧರ ಕಾಮತ್, ವಿದ್ಯಾರ್ಥಿವೇತನ ನಿಧಿ ಅಲುಮ್ನಿ ಅಸೋಸಿಯೇಶನ್ ಅಧ್ಯಕ್ಷೆ ನಿರೋಶ್ ಕುಮಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News