ನಮ್ಮ ನಾಯಕರ ವಿರುದ್ಧ ವಿಪಕ್ಷಗಳು ವಾಮಾಚಾರ ಮಾಡುತ್ತಿವೆ: ಬಿಜೆಪಿ ಮುಖಂಡರ ನಿಧನದ ಬಗ್ಗೆ ಪ್ರಜ್ಞಾ ಸಿಂಗ್ ಹೇಳಿಕೆ

Update: 2019-08-26 15:07 GMT

ಭೋಪಾಲ, ಆ.26: ಬಿಜೆಪಿಯ ಹಿರಿಯ ಮುಖಂಡರನ್ನು ಘಾಸಿಗೊಳಿಸಲು ವಿಪಕ್ಷಗಳು (ವಾಮಾಚಾರ) ದುಷ್ಟಶಕ್ತಿಯನ್ನು ಪ್ರಯೋಗಿಸುತ್ತಿವೆ. ಹಿರಿಯ ಮುಖಂಡರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರ ಅಕಾಲಿಕ ನಿಧನಕ್ಕೆ ದುಷ್ಟ ಶಕ್ತಿ ಪ್ರಯೋಗವೇ ಕಾರಣ ಎಂದು ಬಿಜೆಪಿಯ ಸಂಸದೆ ಪ್ರಜ್ಞಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶನಿವಾರ ನಿಧನರಾದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರಿಗೆ ಸಂತಾಪ ಸೂಚಿಸುವ ಸಭೆಯನ್ನು ಮಧ್ಯಪ್ರದೇಶದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಪ್ರಜ್ಞಾ ಸಿಂಗ್, ಬಿಜೆಪಿಗೆ ಸಂಕಷ್ಟ ಕಾಲ ಎದುರಾಗಲಿದೆ. ಬಿಜೆಪಿಯ ಏಳಿಗೆಯನ್ನು ಸಹಿಸದ ವಿಪಕ್ಷಗಳು ದುಷ್ಟ ಶಕ್ತಿಯನ್ನು ಪ್ರಯೋಗಿಸುವ ಸಾಧ್ಯತೆಗಳಿವೆ ಎಂದು ಈ ಹಿಂದೆ ಒಬ್ಬರು ಸ್ವಾಮೀಜಿ ತನಗೆ ತಿಳಿಸಿದ್ದರು. ಈಗ ಪಕ್ಷದ ಹಿರಿಯ ಮುಖಂಡರು ಒಬ್ಬೊಬ್ಬರಾಗಿ ನಮ್ಮನ್ನು ಅಗಲುತ್ತಿರುವುದನ್ನು ನೋಡಿದರೆ ಅವರ ಮಾತು ನಿಜವಾಗಿದೆ ಎಂದು ಹೇಳಿದರು.

ಕಳೆದ ಒಂದು ವರ್ಷದಲ್ಲಿ ಬಿಜೆಪಿಯ ಪ್ರಮುಖರಾದ ಮಾಜಿ ಪ್ರಧಾನಿ ವಾಜಪೇಯಿ, ಮನೋಹರ್ ಪಾರಿಕ್ಕರ್, ಅನಂತ್ ಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News