ನಿಟ್ಟೆ ವಿವಿಯಲ್ಲಿ ರಾಷ್ಟ್ರಮಟ್ಟದ ಕಾರ್ಯಗಾರ ಉದ್ಘಾಟನೆ

Update: 2019-09-07 17:07 GMT

ಕೊಣಾಜೆ: ಶಸ್ತ್ರಚಿಕಿತ್ಸಕರಿಗೆ ಇರುವಷ್ಟೇ ಜವಾಬ್ದಾರಿ  ಅರಿವಳಿಕೆ ತಜ್ಞರಿಗೆ ಇರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಅರಿವಳಿಕೆ ವಿಭಾಗ ಪ್ರಮುಖ ಪಾತ್ರ ವಹಿಸುತ್ತದೆ. ಈ  ಕ್ಷೇತ್ರದಲ್ಲಿನ ಪರಸ್ಪರ ಜ್ಞಾನ ವಿನಿಯೋಗ ನಡೆಸಲು ರಾಷ್ಟ್ರಮಟ್ಟದ ಕಾರ್ಯಗಾರ ಸಹಕಾರಿ. ಈ ನಿಟ್ಟಿನಲ್ಲಿ  ನಿಟ್ಟೆ ವಿ.ವಿಯ ಅರಿವಳಿಕೆ ವಿಭಾಗ ಆಯೋಜಿಸಿರುವ ಕಾರ್ಯಕ್ರಮ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿರುವವರಿಗೆ ಹಾಗೂ  ಕಾರ್ಯ ನಡೆಸುತ್ತಿರುವ ಮಂದಿಗೆ ಸಹಕಾರಿಯಾಗಲಿ ಎಂದು  ನಿಟ್ಟೆ ಪರಿಗಣಿತ ವಿ.ವಿಯ ಉಪಕುಲಾಧಿಪತಿ  ಪ್ರೊ. ಎಂ.ಶಾಂತಾರಾಮ ಶೆಟ್ಟಿ ಹೇಳಿದರು.

ಅವರು ಆಲ್ ಇಂಡಿಯಾ ಢಿಫಿಕಲ್ಟ್ ಏರ್ ವೇ ಅಸೋಸಿಯೇಷನ್ ಇದರ ಮಂಗಳೂರು ಬ್ರಾಂಚ್ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ವತಿಯಿಂದ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾದ 10ನೇ ರಾಷ್ಟ್ರಮಟ್ಟದ ಏರ್ ವೇ ಕಾನ್ಫರೆನ್ಸ್ ` ಎನ್ ಎ ಸಿ 2019 ರಲ್ಲಿ ` ಏರ್ ವೇ ನಿಯತಕಾಲಿಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಅರಿವಳಿಕೆ ಕ್ಷೇತ್ರದಲ್ಲಿ ವಿವಿಧ ಭಾಗದಲ್ಲಿರುವವರಿಗೆ ಜ್ಞಾನದ ಕೊರತೆ ಹಾಗೂ ಪ್ರಸ್ತುತ ವಿಚಾರದಲ್ಲಿನ ಕೊರತೆಯೂ ಇರುವುದು.  ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯಗಾರಗಳು ಎಲ್ಲರನ್ನು ಒಗ್ಗೂಡಿಸುವ ಮೂಲಕ ಪರಸ್ಪರ ಜ್ಞಾನ ಹಂಚುವಿಕೆಗೆ ಸಹಕಾರಿಯಾಗುವುದು.  ಕ್ಷೇಮ ಆಸ್ಪತ್ರೆಯಲ್ಲಿಯೂ ಐದು ಅರುವಳಿಕೆ ವಿಭಾಗಗಳು ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ. ಈ ಮೂಲಕ ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸಲು ಸಾಧ್ಯವಾಗಿದೆ.  ಜೀವನದಲ್ಲಿ ಸೋಲು  ಮನುಷ್ಯನ ಭವಿಷ್ಯದ ಜೀವನ ರೂಪಿಸುತ್ತದೆ. ವೈದ್ಯರು ಕ್ಷೇತ್ರದಲ್ಲಿ  ಹಲವು ಸೋಲುಗಳನ್ನು ಅನುಭವಿಸಿ ಕ್ಷೇತ್ರದಲ್ಲಿ ಸಾಧನೆಗೈದವರಿದ್ದಾರೆ. ಅರಿವಳಿಕೆ ಶಸ್ತ್ರಕ್ರಿಯೆ ರಾಣಿ ವಿಕ್ಟೋರಿಯಾ ಮೇಲೆ ಪ್ರಥಮ ಪ್ರಯೋಗವಾಗಿ ನಡೆದಿದೆ.  ಜೇಮ್ಸ್ ಅನ್ನುವ ಅರಿವಳಿಕೆ ತಜ್ಞ ಅದನ್ನು ನಡೆಸಿದ್ದರು. ಸ್ವಲ್ಪ ತಪ್ಪಿದರೂ ಅವರ ಜೀವಕ್ಕೆ ಅಪಾಯ ಕಾದಿತ್ತು.  ಅಲ್ಲಿನ ಯಶಸ್ಸು ಇದೀಗ ವಿಶ್ವಾದ್ಯಂತ ಅರಿವಳಿಕೆ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆಲ್ ಇಂಡಿಯಾ ಢಿಫಿಕಲ್ಟ್ ಏರ್ ವೇ ಅಸೋಸಿಯೇಷನ್ ಇದರ ಅಧ್ಯಕ್ಷೆ ಡಾ.ಶೀಲಾ ಮ್ಯಾತ್ರ ನ್ಯಾನನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅಸೋಸಿಯೇಷನ್ನಿನ ಹುಟ್ಟು ಸ್ಥಳದಲ್ಲೇ ರಾಷ್ಟ್ರಮಟ್ಟದ ಕಾರ್ಯಗಾರವನ್ನು ಆಯೋಜಿಸಿರುವುದು ಹೆಮ್ಮೆಯ ವಿಚಾರ. ಆರಂಭದಲ್ಲಿ ಸಣ್ಣ ಸಂಸ್ಥೆಯಾಗಿ  ಸ್ಥಾಪನೆಯಾದ  ತಂಡ ಇದೀಗ 800 ಮಂದಿ ಸದಸ್ಯರನ್ನು ಒಳಗೊಂಡ  ಅಸೋಸಿಯೇಷನ್ ಆಗಿ ರೂಪುಗೊಂಡಿದೆ.  ಅಲ್ಪ ಸಮಯದಲ್ಲಿ ಸಂಸ್ಥೆಯ ಸದಸ್ಯರು , ಕುಟುಂಬದಂತೆ ಆಗಾಗ್ಗ ಸಭೆ ಸೇರಿ ನಡೆಸಿದ ಶ್ರಮದ ಫಲವಾಗಿ ಪರಿಣಾಮಕಾರಿ ಯಾಗಿ ಬೆಳೆದುನಿಂತಿದೆ. ಈವರೆಗೆ 500 ಮಾರ್ಗಸೂಚಿಗಳು ಪ್ರಕಟವಾಗಿರುವುದು ದಾಖಲೆ ಎಂದರು.

ನಿಟ್ಟೆ ವಿಶ್ವವಿದ್ಯಾಲಯದ  ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ.ಪಿ.ಯಸ್ ಪ್ರಕಾಶ್ , ಸಹಡೀನ್ ಡಾ.ಜೆ.ಪಿ ಶೆಟ್ಟಿ, ಅನೆಸ್ತೀಷಿಯ ಅಸೋಸಿಯೇಷನ್ ಮಂಗಳೂರು ವಿಭಾಗ ಅಧ್ಯಕ್ಷ ಡಾ. ಬಾಲ ಭಾಸ್ಕರ್ ,  ಡಾ. ಗೋವಿಂದ ರಾಜ್ ಭಟ್ , ಕೆಎಂಸಿ ಆಸ್ಪತ್ರೆ ಪರಿವೀಕ್ಷಕ ಡಾ.ಗಣಪತಿ ಹೆಗ್ಡೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಏರ್ ವೇ ಕುರಿತು ಸಂಪೂರ್ಣ ವಿವರಗಳುಳ್ಳ ವಿಶೇಷ ಸಂಚಿಕೆ ` ಏರ್ ವೇ ' ನಿಯತಕಾಲಿಕೆಯನ್ನು ಬಿಡುಗಡೆಗೊಳಿಸಲಾ ಯಿತು.  ಇದೇ ವೇಳೆ ಸಂಚಿಕೆಯ ಸಂಪಾದಕ ಡಾ.ರಾಮ್ ಕುಮಾರ್ ಇವರನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News