ಕಸಾಪ ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ ಬಿ.ತಮ್ಮಯ್ಯ ನಿಧನ

Update: 2019-09-10 12:58 GMT

ಬಂಟ್ವಾಳ, ಸೆ. 10: ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ, ತುಳು ಲಿಪಿಯನ್ನು ಶಾಲೆಗಳಲ್ಲಿ ಕಲಿಸುವ ಮೂಲಕ ಜನಪ್ರಿಯರಾಗಿದ್ದ ಬಂಟ್ವಾಳದ ಕೈಕುಂಜೆ ನಿವಾಸಿ ಬಿ.ತಮ್ಮಯ್ಯ (71) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಮಂಗಳವಾರ ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸಾಹಿತ್ಯ ಸಾಧಕರು

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬೋವಿನಡಿ ದಿ. ಗುಮ್ಮಣ ಪೂಜಾರಿ ಮತ್ತು ಚಿಕ್ಕಮ್ಮ ದಂಪತಿಯ ಪುತ್ರರಾಗಿ 1948ರಲ್ಲಿ ಜನಿಸಿದ ತಮ್ಮಯ್ಯನವರು, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಪ್ರೌಢಶಿಕ್ಷಣವನ್ನು ನೆರಿಯದಲ್ಲಿ, ಹೈಸ್ಕೂಲ್ ಶಿಕ್ಷಣವನ್ನು ಧರ್ಮಸ್ಥಳದಲ್ಲಿ ಪೂರೈಸಿದರು.

ಹೈಸ್ಕೂಲಿನಲ್ಲಿ ಕಬಡ್ಡಿ, ವಾಲಿಬಾಲ್, ಯಕ್ಷಗಾನ, ನಾಟಕಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ತಮ್ಮಯರು, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದರು. ತುಳು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಅಭಿನಯಿಸಿ, ಯಕ್ಷಗಾನದಲ್ಲಿ ವೇಷಧಾರಿಯಾಗಿ ಕೂಡಾ ಅಭಿನಯಿಸಿದ ಕಲಾವಿದರು.

ವೃತ್ತಿ ಜೀವನ

ಉಜಿರೆಯಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿ 1972ರಲ್ಲಿ ಮಂಗಳೂರಿನ ಕಸ್ಬಾ ಗ್ರಾಮದಲ್ಲಿ ಗ್ರಾಮ ಕರಣಿಕರ ಹುದ್ದೆಗೆ ಸೇರ್ಪಡೆಗೊಂಡ ಸಮಯದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಬಿಎ ಪದವಿ ಪಡೆದುಕೊಂಡರು. ಬಂಟ್ವಾಳ ತಾಲೂಕಿಗೆ ವರ್ಗಾವಣೆ ಗೊಂಡ ಬಳಿಕ ವಿವಿಧ ಗ್ರಾಮ ಪಂಚಾಯತ್‍ಗಳಲ್ಲಿ ಕಾರ್ಯನಿರ್ವಹಿಸಿ 2001ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಂದಾಯ ಅಧಿಕಾರಿಯಾಗಿ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಸೇವೆ ಸಲ್ಲಿಸಿ 2006ರಲ್ಲಿ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದರು.

1974ರಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ 15 ವರ್ಷ ಕೆಲಸ ಮಾಡಿದ ಅನುಭವ ಇವರದ್ದಾಗಿದ್ದು, ಬಂಟ್ವಾಳ ಸರಕಾರಿ ನೌಕರರ ಸಂಘದ ಕಟ್ಟಡ ಸಮಿತಿಯ ಉಪಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಕ್ಷೇತ್ರ

ಕಂದಾಯ ನೌಕರರ ಸಂಘದ ಪದಾಧಿಕಾರಿಯಾಗಿ ಕೆಲಸ ನಿರ್ವಹಿಸಿ ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್‍ನಲ್ಲಿ 10 ವರ್ಷ ಕಾರ್ಯದರ್ಶಿಯಾಗಿ, 4 ವರ್ಷ ಅಧ್ಯಕ್ಷರಾಗಿ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಣತೆ, ಕಾಡಿನ ಹಕ್ಕಿ ಹಾಡಿತು, ಶ್ರೀ ನಾರಾಯಣಗುರು ಭಜನೆ, ತಟಪಟ, ಹನಿಪನಿ, ಹನಿ ಕವಿತೆ ರಚಿಸಿ ಮೊದಲಾದ 6 ಕವನ ಸಂಕಲನ ರಚಿಸಿದ್ದಲ್ಲದೆ, ಚಿಂತನ-ಮಂಥನ ಲೇಖನಗಳ ಸಂಗ್ರಹ, ಹಿಂದಿರುಗಿ ನೋಡಿದಾಗ-ಆತ್ಮಕಥೆ, ಕರಿಕೋಟು ಕಥಾ ಸಂಕಲನಗಳನ್ನು ರಚಿಸಿದ್ದಾರೆ. ತುಳುವೆರೆ ಪರ್ಬ ತುಳು ಲಿಪಿ ಮತ್ತು ಕನ್ನಡದಲ್ಲಿ ಕವನ ಸಂಕಲನ ಹೊರತರಲಾಗಿದೆ.

ತುಳು ಲಿಪಿ ಶಿಕ್ಷಕ

ತುಳುವೆ ತುಳು ಭಾಷಾ ಲಿಪಿಯ ಮೊದಲ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸುತ್ತಿದ್ದಾರೆ. ತುಳು ಭಾಷಾ ಆಸಕ್ತರಿಗಾಗಿ ತುಳು ಲಿಪಿ ಕಲ್ಪುಲೆ ಎಂಬ ಪುಸ್ತಕವನ್ನು ಹೊರತಂದು ತಾವು ತುಳು ಲಿಪಿ ಶಿಕ್ಷಕನಾಗಿ ಅದೆಷ್ಟೋ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತುಳು ಲಿಪಿಯನ್ನು ಕಲಿಸಿದ್ದಾರೆ. ಈ ವಿಶೇಷ ಸಾಧನೆಯನ್ನು ಗುರುತಿಸಿ ತುಳು ಸಾಹಿತ್ಯ ಅಕಾಡೆಮಿಯಿಂದ ಚಾವಡಿ ತಮ್ಮನ ನೀಡಿ ಸನ್ಮಾನಿಸಲಾಗಿದೆ.

ಹಾಳೆ ಚಪ್ಪಲಿ

ಒಳಾಂಗಣದಲ್ಲಿ ಧರಿಸಲು ಉಪಯೋಗಿಸುವ ಹಾಳೆ ಚಪ್ಪಲಿಯನ್ನು ಜನರು ತುಂಬಾ ಮೆಚ್ಚಿಕೊಂಡಿದ್ದಾರೆ. ಅಡಿಕೆ ಹಾಳೆಯಿಂದ ಚೀಲ, ಹೇಟ್, ಬೀಸಣಿಕೆ ಮೊದಲಾದುವನ್ನು ರಾಷ್ಟ್ರೀಯ ಸೇವಾ ಯೋಜನೆ ಮಕ್ಕಳಿಗೆ ತಯಾರಿಸಲು ತರಬೇತಿ ನೀಡುವುದು, ಹೀಗೆ ಸರಕಾರಿ ನೌಕರಿಯಲ್ಲಿದ್ದು ಕೊಂಡು ಸಾರ್ವಜನಿಕರೊಡನೆ ನಿರಂತರ ಸಂಪರ್ಕವನ್ನಿರಿಸಿಕೊಂಡಿದ್ದರು. 32 ವರ್ಷಗಳಿಂದ ಯುವವಾಹಿನಿ ಸಲಹೆಗಾರರಾಗಿ ಬಂಟ್ವಾಳದ ಸ್ಥಾಪಕಾಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News