ನ್ಯಾಯಕ್ಕಾಗಿ ಹಂಬಲಿಸುವವರಿಗೆ ನಾರಾಯಣ ಗುರು ಆದರ್ಶ: ಸಚಿವ ಕೋಟ

Update: 2019-09-13 11:08 GMT

ಮಂಗಳೂರು, ಸೆ.13: ಬ್ರಹ್ಮಶ್ರೀ ನಾರಾಯಣ ಗುರುಧ್ವನಿ ಇಲ್ಲದ ಸಮಾಜಕ್ಕೆ ಧ್ವನಿಯಾಗಿ ಮಾನವರೆಲ್ಲಾ ಒಂದೇ ಜಾತಿ, ಒಂದೇ ಧರ್ಮ, ಒಂದೆ ಕುಲಕ್ಕೆ ಸೇರಿದವರು ಎಂಬ ಸಂದೇಶವನ್ನು ಸಮಸ್ತ ಮನುಕುಲಕ್ಕೆ ಸಾರಿದವರು. ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುವವರಿಗೆ ಅವರು ಆದರ್ಶಪ್ರಾಯರಾಗಿದ್ದಾರೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ದ.ಕ. ಜಿಪಂ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಕುದ್ರೋಳಿ ಕ್ಷೇತ್ರದಲ್ಲಿಂದು ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೇರಳದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಗೆ ಕಾರಣರಾದ ನಾರಾಯಣ ಗುರುಗಳು ''ಶೋಷಿತ ಸಮುದಾಯ ಶಿಕ್ಷಣದಿಂದ ಶಕ್ತಿ ಪಡೆಯಿರಿ ಮತ್ತು ಸಮಾನತೆಯ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಆ ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಬದುಕಬೇಕು'' ಎಂದು ಕರೆ ನೀಡಿದವರು.

ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ನಾರಾಯಣ ಗುರು ನೀಡಿರುವ ‘ಮಾನವರೆಲ್ಲಾ ಒಂದೇ’ ಸಂದೇಶ ಒಂದು ಸಮಾಜಕ್ಕೆ ಮಾತ್ರವಲ್ಲ ಸಮಸ್ತ ಮನುಕುಲಕ್ಕೆ ನೀಡಿದ ಸಂದೇಶವಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಕೇಶವ ಬಂಗೇರ, ನಾರಾಯಣ ಗುರುಗಳು ಮಹಾತ್ಮಾ ಗಾಂಧಿಗೆ ಪ್ರೇರಣೆಯಾದವರು. ಶೂದ್ರರಿಗೆ ಶಿವಾಲಯ ಕಟ್ಟಿ ಆರಾಧಿಸಲು ಅವಕಾಶ ನೀಡಿ ಸ್ವಾಭಿಮಾನಿ ಸಮಾಜಕ್ಕೆ ನಾಂದಿ ಹಾಡಿದರು. ಅವರ ಬಗ್ಗೆ ಪಠ್ಯಪುಸ್ತಕವನ್ನು ಸರಕಾರ ರಚಿಸಬೇಕು ಎಂದು ಒತ್ತಾಯಿಸಿದರು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News