ಬಿಜೆಪಿ ನಾಯಕ ಚಿನ್ಮಯಾನಂದ ಅತ್ಯಾಚಾರ ಪ್ರಕರಣದ ಸಾಕ್ಷಿನಾಶ: ಸಂತ್ರಸ್ತೆ ಆರೋಪ

Update: 2019-09-14 14:28 GMT

ಶಹಜಹಾನ್‌ಪುರ,ಸೆ.14: ಬಿಜೆಪಿ ನಾಯಕ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಸಂತ್ರಸ್ತೆ ಉತ್ತರ ಪ್ರದೇಶದ ಕಾಲೇಜು ವಿದ್ಯಾರ್ಥಿನಿ, ಈ ಘಟನೆ ನಡೆದಿರುವ ಶಹಜಹಾನ್‌ಪುರ ಜಿಲ್ಲೆಯ ಆರೋಪಿ ಆಶ್ರಮದ ಮಲಗುವ ಕೋಣೆಯಿಂದ ಸಾಕ್ಷಿನಾಶ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಶುಕ್ರವಾರದಂದು ಸಿಟ್ ತಂಡ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕೂ ಮೊದಲು ಅಲ್ಲಿದ್ದ ಸಾಕ್ಷಿಗಳನ್ನು ನಾಶಗೊಳಿಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆದರೆ ತನಿಖಾ ತಂಡ ಆರೋಪಿ ಬಳಸಿದ್ದ ಸಾಬೂನು ಮತ್ತು ಟವೆಲನ್ನು ಜೊತೆಗೆ 23ರ ಹರೆಯದ ಸಂತ್ರಸ್ತೆ ಮಾಡಿರುವ ಆರೋಪಕ್ಕೆ ಪುಷ್ಟಿ ನೀಡುವಂತ ಇನ್ನಷ್ಟು ವೀಡಿಯೊ ಸಾಕ್ಷಿಗಳಿರುವ ಎರಡನೇ ಪೆನ್‌ಡ್ರೈವನ್ನು ವಶಪಡಿಸಿಕೊಂಡಿದ್ದಾರೆ.

ಮಲಗುವ ಕೋಣೆಗೆ ಹೊಸ ಬಣ್ಣ ಬಳಿಯಲಾಗಿದೆ. ಇದರಿಂದ ಬಹುಮುಖ್ಯ ಸಾಕ್ಷಿಗಳನ್ನು ತೆಗೆದುಹಾಕಲಾಗಿದೆ. ಆದರೆ ಮಸಾಜ್ ಮಾಡಲು ಬಳಸಿದ್ದ ಎರಡು ಬೌಲ್‌ಗಳು ಹಾಗೆಯೇ ಉಳಿದಿವೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ. “ಚಿನ್ಮಯಾನಂದನಿಗೆ ಮಸಾಜ್ ಮಾಡಲು ನನ್ನ ಮೇಲೆ ಒತ್ತಡ ಹೇರಲಾಗುತ್ತಿತ್ತು ಮತ್ತು ಅನೇಕ ಬಾರಿ ಬಂದೂಕು ತೋರಿಸಿ ಹೆಸರಿಸಲಾಗುತ್ತಿತ್ತು” ಎಂದು ಸಂತ್ರಸ್ತೆ ಈ ಮೊದಲು ತಿಳಿಸಿದ್ದರು. “ನಾನು ಸ್ನಾನ ಮಾಡುವ ವೀಡಿಯೊವನ್ನು ತೆಗೆದು ಬ್ಲಾಕ್‌ಮೇಲ್ ಮಾಡುವ ಮೂಲಕ ಹನ್ನೆರಡು ತಿಂಗಳ ಕಾಲ ಮಾಜಿ ಕೇಂದ್ರ ಸಚಿವ ತನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ” ಎಂದು ಚಿನ್ಮಯಾನಂದ ನಡೆಸುತ್ತಿರುವ ಕಾಲೇಜಿನ ಕಾನೂನು ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ಆರೋಪಿಸಿದ್ದರು.

ಉತ್ತರ ಪ್ರದೇಶ ಪೊಲೀಸ್ ಮತ್ತು ಜಿಲ್ಲಾಡಳಿತದಿಂದ ತನ್ನ ಮತ್ತು ತನ್ನ ಮನೆಯವರಿಗೆ ಬೆದರಿಕೆ ಎಂದು ಆರೋಪಿಸಿದ್ದ ಸಂತ್ರಸ್ತೆ ಕಳೆದ ತಿಂಗಳು ಒಂದು ವಾರ ಕಾಲ ನಾಪತ್ತೆಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News