ರಾಜಸ್ಥಾನ: ಕಾಂಗ್ರೆಸ್ ಸೇರಲಿರುವ ಬಿಎಸ್ಪಿಯ ಎಲ್ಲಾ ಆರು ಶಾಸಕರು

Update: 2019-09-17 05:00 GMT

ಜೈಪುರ, ಸೆ.17 : ರಾಜಸ್ಥಾನದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಎಲ್ಲ ಆರು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ.

ಬಿಎಸ್ಪಿ ಶಾಸಕರು ತಮ್ಮ ನಿರ್ಧಾರವನ್ನು ರಾಜ್ಯ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರಿಗೆ ಸೋಮವಾರ ತಡರಾತ್ರಿ ತಿಳಿಸಿದರು.

ಬಿಎಸ್ಪಿ ಶಾಸಕರು ಜೋಶಿಯನ್ನು ಭೇಟಿಯಾಗಿ ಅವರಿಗೆ ಈ ಬಗ್ಗೆ ಪತ್ರ ನೀಡಿದ್ದಾರೆ. ಬಿಎಸ್ಪಿ ಶಾಸಕರ ಈ ನಿರ್ಧಾರದಿಂದ 200 ಸದಸ್ಯರ ಸದನದಲ್ಲಿ ಕಾಂಗ್ರೆಸ್ ಬಲ 106 ಕ್ಕೆ ಏರಲಿದೆ .

 ನಾಡ್ಬಾಯಿ ವಿಧಾನಸಭಾ ಕ್ಷೇತ್ರದ ಜೋಗಿಂದರ್ ಸಿಂಗ್ ಅವನಾ, ಕಿಶನ್‌ಗಢ ಬಾಸ್‌ ಕ್ಷೇತ್ರದ  ದೀಪ್ ಚಂದ್, ಉದಯಪುರಾವತಿಯ ರಾಜೇಂದ್ರ ಸಿಂಗ್ ಗುಧಾ, ಕರೌಲಿಯ ಲಖನ್ ಸಿಂಗ್, ನಗರ ಕ್ಷೇತ್ರದ  ವಾಜಿಬ್ ಅಲಿ ಮತ್ತು ಟಿಜಾರಾದ ಸಂದೀಪ್ ಕುಮಾರ್ ಕಾಂಗ್ರೆಸ್ ಸೇರಲಿರುವ ಬಿಎಸ್ಪಿ ಶಾಸಕರು.

“ನಾವು ರಾಜಸ್ಥಾನ ಮತ್ತು ನಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರಿದ್ದೇವೆ. ನಾವೆಲ್ಲರೂ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಬಗ್ಗೆ ಒಮ್ಮತದ  ನಿರ್ಧಾರ ತೆಗೆದುಕೊಂಡಿದ್ದೇವೆ. ವಿಧಾನಸಭೆಯಲ್ಲಿ ಬಿಎಸ್ಪಿ ತನ್ನ ಬೆಂಬಲವನ್ನು ಕಾಂಗ್ರೆಸ್  ಮುಂದುವರಿಸಲಿದೆ, ಆದರೆ ಮತ್ತೊಂದೆಡೆ ಲೋಕಸಭಾ ಚುನಾವಣೆಯಲ್ಲಿ ಹೋರಾಡುತ್ತಿದೆ, ”ಎಂದು ಅವನಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News