ಬಂಟ್ವಾಳ: ಮುಂಗಡ ವಸೂಲಿ ಕ್ರಮ ಖಂಡಿಸಿ ಧರಣಿ ಸತ್ಯಗ್ರಾಹ

Update: 2019-09-17 15:14 GMT

ಬಂಟ್ವಾಳ, ಸೆ. 17: ಬಂಟ್ವಾಳ ಪುರಸಭೆಯು ಸ್ವಯಂಘೋಷಿತ ಆಸ್ತಿ ತೆರಿಗೆಯ ಜೊತೆ ಕಸ ನಿರ್ವಹಣಾ ಶುಲ್ಕವನ್ನು ಮುಂಗಡವಾಗಿ ವಸೂಲಿ ಮಾಡುವ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಸಮಾನಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ  ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಬಂಟ್ವಾಳ ಪುರಸಭಾ ಕಚೇರಿ ಮುಂಭಾಗ ಮಂಗಳವಾರ ನಡೆಯಿತು.

ಇದಕ್ಕು ಮೊದಲು ರಥಬೀದಿಯಲ್ಲಿರುವ ಸ್ವರ್ಣ ಸೌಧದ ಮುಂಭಾಗದಲ್ಲಿ ಪುರವಾಸಿಗಳು, ವರ್ತಕರು ಸಭೆ ಸೇರಿ ಅಲ್ಲಿಂದ ಮೆರವಣಿಗೆ ಮೂಲಕ ಪುರಸಭಾಡಳಿತಕ್ಕೆ ದಿಕ್ಕಾರ ಕೂಗುತ್ತಾ ಪುರಸಭಾ ಕಚೇರಿಯವರೆಗೆ ಸಾಗಿ ಬಂದು ಧರಣಿ ಕುಳಿತರು.

ತೆರಿಗೆಯ ಜೊತೆ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುವ ಪುರಸಭೆಯ ಜನವಿರೋಧಿ ನೀತಿಯನ್ನು  ಪ್ರತಿಭಟನಾಕಾರರು ಈ ಸಂದರ್ಭ ಖಂಡಿಸಿದರಲ್ಲದೆ ಖುದ್ದು ಜಿಲ್ಲಾಧಿಕಾರಿಯವರೇ ಅಗಮಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಪಟ್ಟುಹಿಡಿದರು. ಈ ವಿಚಾರದಲ್ಲಿ ಜಿಲ್ಲಾಧಿಕಾರಿಯವರು ಸ್ಪಂದಿಸದಿದ್ದರೆ ಅಮರಣಾಂತ ಉಪವಾಸ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಚುನಾಯಿತ ಪ್ರತಿನಿಧಿ ಆಡಳಿತ ಇಲ್ಲದಿದ್ದಾಗ ತೆರಿಗೆಯ ಜೊತೆಯಲ್ಲಿ ಕಸ ನಿರ್ವಹಣೆಯ ಶುಲ್ಕವನ್ನು ಮುಂಗಡವಾಗಿ ವಸೂಲಿ ಮಾಡುವುದು ಸರಿಯಲ್ಲ. ಜಿಲ್ಲಾಧಿಕಾರಿಯವರು ಈ ಬಗ್ಗೆ ಪುನರ್ ಪರಿಶೀಲಿಸಿ ಇಂತಹ ಜನವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಪುರಸಭಾ ಸದಸ್ಯರಾದ ವಾಸುಪೂಜಾರಿ, ಮೂನೀಶ್ ಆಲಿ, ಗಂಗಾಧರ ಪೂಜಾರಿ, ಜನಾರ್ಧನ ಚಂಡ್ತಿಮಾರ್ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಪುರಸಭೆಯ ಈ ಹಿಂದಿನ ಆಡಳಿತಾವಧಿಯಲ್ಲಿ ತೆರಿಗೆ ಜೊತೆ ಶುಲ್ಕ ವಸೂಲಿಯ ಬಗ್ಗೆ ಯಾವುದೇ ನಿರ್ಣಯ ದಾಖಲಾಗಿಲ್ಲ. ಇದು ಪುರಸಭೆಯ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿಯಾಗಿರುವ ಸಹಾಯಕ ಕಮಿಷನರ್ ಅವರ ಏಕಪಕ್ಷೀಯ ನಿರ್ಧಾರವಾಗಿದೆ ಎಂದರು. ಚುನಾಯಿತ ಪ್ರತಿನಿಧಿಗಳ ಜೊತೆ ಕನಿಷ್ಠ ಚರ್ಚಿಸದೆ ಈ ಕ್ರಮ ಕೈಗೊಂಡಿರುವುದನ್ನು ಖಂಡಿಸಿದರು.

ಪುರಸಭಾ ವ್ಯಾಪ್ತಿಯ ಕೆಲ ವಾಡ್9ಗಳಿಗೆ ಈಗಲೂ ಕಸ ಸಂಗ್ರಹದ ವಾಹನಗಳು ಹೋಗುವಂತ ಸ್ಥಿತಿಯಲ್ಲಿಲ್ಲ. ಸಮರ್ಪಕ ತ್ಯಾಜ್ಯ ವಿಲೇವಾರಿಯು ಆಗದಿರುವ ಈ ಹಂತದಲ್ಲಿ ಪುರವಾಸಿಗಳಿಂದ ಕಸದ ಶುಲ್ಕವನ್ನು ತೆರಿಗೆಯ ಜೊತೆ ಸಂಗ್ರಹಿಸುವುದು ಸಮರ್ಥನಿಯವಲ್ಲ. ಇದೀಗ ನೀರಿನ ಶುಲ್ಕವನ್ನು 90 ರಿಂದ 150ಕ್ಕೆ  ಹೆಚ್ಚಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸಮನ್ವಯ ಸಮಿತಿ ಮುಖಂಡರಾದ ರಾಮಣ್ಣ ವಿಟ್ಲ, ಬಿ.ಶೇಖರ,ಮಾಜಿ ಸದಸ್ಯರಾದ ಬಿ.ಮೋಹನ್, ಸದಾಶಿವ ಬಂಗೇರ, ವಿಠಲ ಬಂಗೇರ, ಮುತ್ತಪ್ಪ ಪೂಜಾರಿ ಮೊದಲಾದವರು ಮಾತನಾಡಿದರು.

ಪುರಸಭಾ ಸದಸ್ಯರಾದ ಸಿದ್ದೀಕ್ ಗುಡ್ಡೆಯಂಗಡಿ, ಮುಹಮ್ಮದ್ ನಂದರಬೆಟ್ಟು, ಲೋಲಾಕ್ಷ, ಹಸೈನಾರ್, ಜೆಸಿಂತಾ, ಶ್ರೀಧರ ಅಮೀನ್, ಜಗದೀಶ್ ಕುಂದರ್, ಸಾದಿಕ್, ಚಂದ್ರಶೇಖರ ಪೂಜಾರಿ, ವೆಂಕಪ್ಪಪೂಜಾರಿ, ಹಾರೂನ್ ರಶೀದ್, ಯೂಸುಫ್ ಆಲಡ್ಕ, ಸುರೇಶ್, ಜಗನ್ನಾಥ ಮೊದಲಾದವರಿದ್ದರು.

ಸಮಿತಿ ಸಂಚಾಲಕ ಪ್ರಭಾಕರ ದೈವಗುಡ್ಡೆ ಸ್ವಾಗತಿಸಿದರು. ಸುರೇಶ್ ನಿರೂಪಿಸಿದರು.

ಮುಖ್ಯಾಧಿಕಾರಿಯಿಂದ ಸಂಧಾನ:

ಈ ನಡುವೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು ಪ್ರತಿಭಟನಾ ನಿರತರೊಂದಿಗೆ ಸಂಧಾನಕ್ಕೆ ಮುಂದಾದರಾದರೂ, ಪ್ರತಿಭಟನಾಕಾರರು ಜಿಲ್ಲಾಧಿಕಾರಿಯವರೇ ಸ್ಥಳಕ್ಕಾಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಪಟ್ಟು ಹಿಡಿದು ಕುಳಿತರು.

ಬೆಳಗ್ಗಿನಿಂದ ಸಂಜೆಯವರೆಗೂ ನಡೆದ ಪ್ರತಿಭಟನೆ ಸಂದರ್ಭ ಜಿಲ್ಲಾಧಿಕಾರಿ ಬರಬೇಕು ಎಂದು ಒತ್ತಾಯಿಸುತ್ತಿದ್ದ ಪ್ರತಿಭಟನಾಕಾರರ ಬಳಿ ಸಂಜೆ ವೇಳೆ ಮಂಗಳೂರು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ಸಂದರ್ಭ ಹೋರಾಟಗಾರರ ಬೇಡಿಕೆ ಈಡೇರಿಸುವ ಭರವಸೆ ನೀಡಿದನ್ವಯ ಪ್ರತಿಭಟನೆ ಮುಕ್ತಾಯಗೊಂಡಿತು.

ಆದೇಶ ಹಿಂದಕ್ಕೆ: ಎಸಿ ಭರವಸೆ

ಕಸ ಸಂಗ್ರಹಣಾ ವಾಹನ ಬಾರದ ಮನೆಗಳಿಂದ ಶುಲ್ಕ ಸಂಗ್ರಹವಿಲ್ಲ, ಎಲ್ಲಿ ವಾಹನ ಬರುತ್ತದೋ ಅವರಿಂದ ಮಾತ್ರ ತಿಂಗಳ ಶುಲ್ಕ, ನೀರಿನ ಬಿಲ್ ಏರಿಕೆ ಹಿಂಪಡೆಯುವುದಾಗಿ ಸಹಾಯಕ ಕಮೀಷನರ್ ಭರವಸೆ ನೀಡಿದ್ದಾರೆ. ಆದ್ದರಿಂದ ಹೋರಾಟವನ್ನು ಕೈಬಿಟ್ಟಿದ್ದು, ಇದು ನಮ್ಮ ಹೋರಾಟಕ್ಕೆ ಸಂದ ಜಯ ಸಮಿತಿ ಸಂಚಾಲಕ ಪ್ರಭಾಕರ ದೈವಗುಡ್ಡೆ ಅವರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News