ಬೆಳ್ತಂಗಡಿ: 1 ಕೋಟಿ ರೂ. ಮೌಲ್ಯದ 10 ಆನೆ ದಂತ ವಶ; ಮೂವರ ಬಂಧನ

Update: 2019-09-18 16:52 GMT

ಬೆಳ್ತಂಗಡಿ: ಕಳೆದ ಮೂರು ತಿಂಗಳಿಂದ ಆನೆ ದಂತ ವ್ಯಾಪರ ನಡೆಸಲು ಬೆಳ್ತಂಗಡಿ ತಾಲೂಕಿನಲ್ಲಿ ಹೊಂಚು ಹಾಕುತ್ತಿದ್ದವರ ತಂಡವೊಂದನ್ನು ಉಜಿರೆ ಸಮೀಪ ಸುರ್ಯ ದೂಜಿರಿಗೆ ಎಂಬಲ್ಲಿ ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳ ಸಹಿತ 51 ಕೆಜಿಯ 10 ಆನೆ ದಂತವನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.

ಉಜಿರೆ ಸುರ್ಯ ರಸ್ತೆಯ ದೂಜಿರಿಗೆ ನಿವಾಸಿ ಅಬ್ರಾಹಂ ಎಂ.ಎ.,(56), ಕೇರಳ ಮೂಲದ ಸುರೇಶ್ ಬಾಬು (49 ಹಾಗೂ ಹಾಸನ ಜಿಲ್ಲೆಯ ಕಚಾಯ ಹೋಬಳಿ ಕಬ್ಬತ್ತಿ ಕ್ರಾಸ್ ರಮೇಶ್ ಕೆ.ಜಿ(31) ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಮಂಗಳೂರಿನ ಅನ್ವರ್ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಉಜಿರೆ ಸುರ್ಯ ರಸ್ತೆಯ ದೂಜಿರಿಗೆ ನಿವಾಸಿ ಅಬ್ರಾಹಂ ಎಂಬಾತನ ರಬ್ಬರ್ ತೋಟದ ಶೆಡ್‍ನಲ್ಲಿ ದಂತ ಇರಿಸಲಾಗಿದ್ದ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಂಚಾರಿ ಅರಣ್ಯ ತಂಡ ಬುಧವಾರ ಮಧ್ಯಾಹ್ನ 1ಗಂಟೆಗೆ ದಾಳಿ ನಡೆಸಿತ್ತು. ಈ ವೇಳೆ ಮೂವರು ಅರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ದಾಳಿ ವೇಳೆ ತಪ್ಪಿಸಿಕೊಂಡಿದ್ದಾನೆ. ಈ ವೇಳೆ ಸುಮಾರು 1 ಕೋಟಿ ರೂ. ಮೌಲ್ಯದ 51 ಕೆ.ಜಿ. 730 ಗ್ರಾಂ. ತೂಕದ 10 ಆನೆ ದಂತ ಸೇರಿದಂತೆ ಒಂದು ಡಬಲ್ ಬ್ಯಾರೆಲ್ ರೈಫಲ್ ಹಾಗೂ 8 ಮದ್ದುಗುಂಡು ವಶಕ್ಕೆ ಪಡೆಯಯಲಾಗಿದೆ.

'ಕೇರಳದಿಂದ ತಂದಿರುವ ಆನೆ ದಂತ';
ಆನೆ ದಂತವನ್ನು ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಆರೋಪಿಗಳು ಕೇರಳದಲ್ಲಿ ಹಾಗೂ ಸ್ಥಳೀಯವಾಗಿ ಆನೆಯನ್ನು ಕೊಂದು ದಂತ ಸಾಗಾಟ ನಡೆಸಿದ್ದಾರೆ ಎಂಬ ಬಗ್ಗೆ ಮಾಹಿತಯಿದ್ದು, ಇದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ತಾಲೂಕಿನ ನೆರಿಯ ಪುದುವೆಟ್ಟು ಪ್ರದೇಶದಲ್ಲಿ ಆನೆಗಳ ಹತ್ಯೆಯಾಗಿದೆಯಾ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಇದರ ಬಗ್ಗೆ ಇಲಾಖೆಯವರು ತನಿಖೆ ನಡೆಸುತ್ತಿದ್ದಾರೆ. 

ಸಿಐಡಿ ಅರಣ್ಯ ಘಟಕ ಬೆಂಗಳೂರು ಎಡಿಜಿಪಿ ಡಾ. ರವಿಂದ್ರನಾಥನ್, ಸಿಐಡಿ ಅರಣ್ಯ ಘಟಕ ಮಂಗಳೂರು ಎಸ್.ಪಿ. ಸುರೇಶ್ ಬಾಬು, ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ಪಿಎಸ್‍ಐ ಪುರುಷೋತ್ತಮ್ ಎ. ಮಾರ್ಗದರ್ಶನದಲ್ಲಿ ಸಿಬಂದಿ ಜಗನ್ನಾಥ್ ಶೆಟ್ಟಿ, ಪ್ರವೀಣ್, ಉದಯ್ ನಾಯಕ್, ಮಹೇಶ್ ಟಿ., ದೇವರಾಜ ಎಚ್., ಸುಂದರ ಶೆಟ್ಟಿ ಹಾಗೂ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್ ಹಾಗೂ ಸಿಬಂದಿ, ಪುತ್ತೂರು  ಅರಣ್ಯ ಸಂಚಾರಿ ದಳ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News