ತಿಹಾರ್ ಕಾರಾಗೃಹದಲ್ಲಿ ಚಿದಂಬರಂ ಅವರನ್ನು ಭೇಟಿಯಾದ ಕಾಂಗ್ರೆಸ್ ನಾಯಕರು
Update: 2019-09-18 15:28 GMT
ಹೊಸದಿಲ್ಲಿ, ಸೆ. 18: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ತಿಹಾರ್ ಕಾರಾಗೃಹದಲ್ಲಿ ಇರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ಕಾಂಗ್ರೆಸ್ನ ಹಿರಿಯ ನಾಯಕರಾಗಿರುವ ಗುಲಾಂ ನಬಿ ಆಝಾದ್ ಹಾಗೂ ಅಹ್ಮದ್ ಪಟೇಲ್ ಭೇಟಿಯಾಗಿದ್ದಾರೆ. ಚಿದಂಬರಂ ಅವರನ್ನು ಭೇಟಿಯಾಗಲು ಇವರೊಂದಿಗೆ ಸಂಸದ ಕಾರ್ತಿ ಚಿದಂಬರಂ ಕೂಡ ತೆರಳಿದ್ದರು.
ಕಾಂಗ್ರೆಸ್ ನಾಯಕರು ಅರ್ಧ ಗಂಟೆಗಳ ಕಾಲ ಚಿದಂಬರಂ ಅವರೊಂದಿಗೆ ಮಾತುಕತೆ ನಡೆಸಿದರು. ಪ್ರಸಕ್ತ ರಾಜಕೀಯ ಪರಿಸ್ಥಿತಿ, ಕಾಶ್ಮೀರ, ಮುಂಬರುವ ಚುನಾವಣೆ, ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಈ ನಾಯಕರು ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. ''ಅವರನ್ನು (ಪಿ. ಚಿದಂಬರಂ) ಭೇಟಿಯಾಗಲು ಮೂವರು ಆಗಮಿಸಿದ್ದರು. ಇದು ದಿನನಿತ್ಯದ ಭೇಟಿಯ ಒಂದು ಭಾಗ'' ಎಂದು ತಿಹಾರ್ ಜೈಲಿನ ಪ್ರಧಾನ ನಿರ್ದೇಶಕ ಸಂದೀಪ್ ಗೋಯಲ್ ತಿಳಿಸಿದ್ದಾರೆ.