ವಿವಿ ಪ್ರವೇಶಕ್ಕೆ ತಡೆ ಒಡ್ಡಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋರನ್ನು ತಳ್ಳಾಡಿದ ವಿದ್ಯಾರ್ಥಿಗಳು

Update: 2019-09-19 14:03 GMT
Photo: timesofindia.com

ಕೊಲ್ಕತ್ತಾ, ಸೆ.19: ಎಬಿವಿಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ವಿದ್ಯಾರ್ಥಿಗಳ ಗುಂಪು ಅವರನ್ನು ತಳ್ಳಾಡಿದ ಘಟನೆ ಇಲ್ಲಿನ ಜಾಧವ್ ಪುರ ವಿವಿಯಲ್ಲಿ ಇಂದು ನಡೆದಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸುಪ್ರಿಯೋರನ್ನು 2 ವಿದ್ಯಾರ್ಥಿ ಸಂಘಟನೆಗಳಾದ ಎಎಫ್ ಎಸ್ ಯು ಮತ್ತು ಎಸ್ ಎಫ್ ಐ ಕಾರ್ಯಕರ್ತರು ವಿವಿಯೊಳಕ್ಕೆ ಪ್ರವೇಶಿಸಲು ಬಿಡದೆ ಒಂದೂವರೆ ಗಂಟೆಗೂ ಅಧಿಕ ಕಾಲ ತಡೆದರು. ಇದೇ ಸಂದರ್ಭ ವಿದ್ಯಾರ್ಥಿಗಳು ‘ಬಾಬುಲ್ ಸುಪ್ರಿಯೋ ಗೋ ಬ್ಯಾಕ್’ ಘೋಷಣೆಗಳನ್ನು ಕೂಗಿದರು.

ನಂತರ ಕಾರ್ಯಕ್ರಮ ಮುಗಿಸಿ ವಿವಿಯಿಂದ ಹೊರಡುವಾಗಲೂ ವಿದ್ಯಾರ್ಥಿಗಳು ಕೇಂದ್ರ ಸಚಿವರನ್ನು ತಡೆದರು. ಕೆಲ ವಿದ್ಯಾರ್ಥಿಗಳು ಸುಪ್ರಿಯೋರನ್ನು ತಳ್ಳಾಡಿದ್ದಾರೆ ಎಂದು ಆರೋಪಿಸಲಾಗಿದೆ.

“ನಾನು ಇಲ್ಲಿಗೆ ರಾಜಕೀಯ ನಡೆಸಲು ಬಂದಿಲ್ಲ. ಆದರೆ ವಿವಿಯ ಕೆಲ ವಿದ್ಯಾರ್ಥಿಗಳ ನಡತೆಯಿಂದ ಬೇಸರವಾಗಿದೆ. ಅವರು ನನಗೆ ಮುತ್ತಿಗೆ ಹಾಕಿ, ನನ್ನ ಕೂದಲನ್ನು ಹಿಡಿದೆಳೆದರು ಮತ್ತು ದೂಡಿ ಹಾಕಿದರು” ಎಂದು ಸುಪ್ರಿಯೋ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News