ಗೋಹತ್ಯೆ ಆರೋಪ: ಶಿಕ್ಷೆಗೊಳಗಾದ ವ್ಯಕ್ತಿಯ ಜೈಲುವಾಸ ರದ್ದುಪಡಿಸಿದ ಗುಜರಾತ್ ಹೈಕೋರ್ಟ್
ಗಾಂಧಿನಗರ, ಸೆ.20: ಗೋಹತ್ಯೆ ಪ್ರಕರಣದ ಆರೋಪಿಗೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಅಮಾನತುಗೊಳಿಸಿದೆ. ಆರೋಪಿಯ ಮೇಲೆ ಗೋಹತ್ಯೆಯ ಆರ್ಥಿಕ ಚಟುವಟಿಕೆಯಲ್ಲಿ ಶಾಮೀಲಾದ ಆರೋಪ ಇಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಈ ಆದೇಶ ನೀಡಿದೆ.
ಗೋಹತ್ಯೆಯಲ್ಲಿ ಶಾಮೀಲಾದ ಆರೋಪದಲ್ಲಿ ಗುಜರಾತ್ ನ ಹೊಸ ಗೋಹತ್ಯೆ ನಿಷೇಧ ಕಾಯ್ದೆಯ ಅನ್ವಯ ರಾಜ್ ಕೋಟ್ ಜಿಲ್ಲೆಯ ಧೋರಜಿ ಪಟ್ಟಣದ ವ್ಯಕ್ತಿಯೊಬ್ಬನಿಗೆ ಸೆಷನ್ಸ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಗೋವಿನಿಂದ ಆರ್ಥಿಕ ಲಾಭ ಪಡೆಯುವ ಉದ್ದೇಶ ಆರೋಪಿಗೆ ಇರಲಿಲ್ಲ ಎನ್ನುವುದು ವಾದ- ಪ್ರತಿವಾದದಿಂದ ಸ್ಪಷ್ಟವಾಗಿದ್ದು, ಗೋವಿನ ಮಾಂಸವನ್ನು ತನ್ನದೇ ಪುತ್ರಿಯ ವಿವಾಹ ಸಮಾರಂಭಕ್ಕೆ ಬಿರಿಯಾನಿ ಸಿದ್ಧಪಡಿಸಲು ಬಳಸಿದ್ದಾನೆ ಎಂಬ ತೀರ್ಮಾನಕ್ಕೆ ಬಂದ ನ್ಯಾಯಾಲಯ ನ್ಯಾಯಾಂಗದ ವಿವೇಚನೆಯನ್ನು ಬಳಸಿ, ಆತನಿಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಪಡಿಸಿದೆ ಎಂದು ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಆರ್.ಪಿ.ಧೊಲಾರಿಯಾ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಆರೋಪಿ ಸಲೀಂ ಮರ್ಕಾನಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಈ ವರ್ಷದ ಜುಲೈ 7ರಂದು ಸಲೀಂಗೆ ರಾಜ್ಕೋಟ್ ಜಿಲ್ಲಾ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 10 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಆಧಾರದಲ್ಲಿ ಬಿಡುಗಡೆ ಆರೋಪಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ.