ಮಂಗಳೂರು ದಸರಕ್ಕೆ ಪೂರ್ವ ಸಿದ್ಧತೆ: ಮೆರವಣಿಗೆಯಲ್ಲಿ ಮಾರ್ಪಾಡು

Update: 2019-09-21 06:03 GMT

ಮಂಗಳೂರು, ಸೆ.21: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವಕ್ಕೆ ಪೂರ್ವ ಸಿದ್ಧತೆಗಳು ಆರಂಭಗೊಂಡಿವೆ. ಸೆ.29ರಿಂದ ಅ.9ರವರೆಗೆ ಮಹೋತ್ಸವ ನಡೆಯಲಿದೆ. ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ಮೆರವಣಿಗೆಯಲ್ಲಿ ಭಕ್ತರ ಆಶಯದಂತೆ ಪ್ರಮುಖ ಮಾರ್ಪಾಡು ಮಾಡಲಾಗಿದೆ.

ದಸರಾ ಮಹೋತ್ಸವ ಅಂಗವಾಗಿ ಶುಕ್ರವಾರ ಕ್ಷೇತ್ರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಮೆರವಣಿಗೆಯ ಮಾರ್ಪಾಟಿನ ಕುರಿತು ಮಾಹಿತಿ ನೀಡಿದರು.

ದಸರಾ ಮಹೋತ್ಸವ ಮೆರವಣಿಗೆಯ ವೈಭವ ನೋಡಲು ನಾನಾ ಜಿಲ್ಲೆ, ರಾಜ್ಯಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ದಸರಾ ಮೆರವಣಿಗೆ ವೈಭವ ನೋಡುವ ಅಭಿಲಾಷೆಯೊಂದಿಗೆ ನಿರೀಕ್ಷೆಯಿಂದ ಗಂಟೆಗಟ್ಟಲೆ ಕಾಯುತ್ತಾರೆ. ಆದರೆ ವರ್ಷದಿಂದ ವರ್ಷಕ್ಕೆ ವೇಷಭೂಷಣ, ಸ್ತಬ್ಧಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮೆರವಣಿಗೆಯೂ ವಿಳಂಬವಾಗುತ್ತಿದೆ. ಇದರಿಂದ ಭಕ್ತಾದಿಗಳು ಗಣಪತಿ, ನವದುರ್ಗೆಯರು ಸಹಿತ ಶಾರದೆಯ ವೈಭವದ ಶೋಭಾಯಾತ್ರೆ ನೋಡಲು ಸಾಧ್ಯವಾಗದೆ ನಿರಾಶೆಯಿಂದ ತೆರಳುತ್ತಿರುವ ಬಗ್ಗೆ ಬಗ್ಗೆ ಕಳೆದ ಮೂರು ವರ್ಷಗಳಿಂದ ಕ್ಷೇತ್ರಕ್ಕೆ ಪತ್ರಗಳು ಬರುತ್ತಿವೆ. ಈ ಕಾರಣದಿಂದ ಈ ವರ್ಷದಿಂದ ದಸರಾ ಮಹೋತ್ಸವ ಮೆರವಣಿಗೆಯಲ್ಲಿ ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ. ಹಸಿರು ಕೊಡೆಗಳು, ಜಾನಪದ ಕಲಾ ತಂಡಗಳ ಬಳಿಕ ನಾರಾಯಣಗುರು, ಗಣಪತಿ, ನವದುರ್ಗೆಯರು ಸಹಿತ ಶಾರದೆಯ ಟ್ಯಾಬ್ಲೋಗಳು ಆರಂಭದಲ್ಲಿ ತೆರಳಲಿವೆ. ಇದಾದ ಬಳಿಕ ವೇಷಭೂಷಣಗಳ ಸ್ತಬ್ಧಚಿತ್ರಗಳು ಸಾಗಿ ಬರಲಿವೆ. ಭಕ್ತಾದಿಗಳ ಅಭಿಪ್ರಾಯದಂತೆ ಕ್ಷೇತ್ರದ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದ್ದು ಮಂಗಳೂರು ದಸರಾ ಮಹೋತ್ಸವ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ಮೆರವಣಿಗೆ ವಿಚಾರದಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಸಾಕಷ್ಟು ಚರ್ಚಿಸಿ ನಿರ್ಧಾರ ತೆಗೆದುಕೊಂಡಿದೆ ಎಂದರು.

ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಸೂಚನೆಯಂತೆ ಈ ನಿರ್ಧಾರ ಮಾಡಲಾಗಿದೆ. ಇದರಿಂದ ಮೆರವಣಿಗೆ ಕನಿಷ್ಠ 4 ಗಂಟೆ ಮುಂಚಿತವಾಗಿ ಸಮಾಪನಗೊಳ್ಳಲಿದೆ. ದೇವಳಕ್ಕೆ ಗೋಲ್ಡನ್ ಬಣ್ಣದ ಪೈಂಟಿಂಗ್ ಕಾರ್ಯ ಪ್ರಗತಿಯಲ್ಲಿದ್ದು, ವಿದ್ಯುದ್ದೀಪಾಲಂಕಾರ ಅಲಂಕಾರ ನಡೆಯುತ್ತಿದೆ. ದರ್ಬಾರು ಮಂಪಟ ಸಿದ್ಧತೆಯಾಗುತ್ತಿದ್ದು, ಭದ್ರತೆ, ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದವರು ಹೇಳಿದರು.

ಕ್ಷೇತ್ರದ ಅಭಿವೃದ್ಧಿಯ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬದಲಾವಣೆ ಜಗದ ನಿಯಮ. ಭಕ್ತರ ಅನುಕೂಲಕ್ಕಾಗಿ ತೆಗೆದುಕೊಂಡ ಈ ನಿರ್ಧಾರವನ್ನು ಎಲ್ಲರೂ ಸ್ವಾಗತಿಸುತ್ತಿರುವುದು ಶ್ಲಾಘನೀಯ ಎಂದರು.

ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕ್ಷೇತ್ರದ ಆಡಳಿತ ಮಂಡಳಿ ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ರವಿಶಂಕರ್ ಮಿಜಾರ್, ಅಭಿವೃದ್ಧಿ ಸಮಿತಿಯ ದೇವೇಂದ್ರ ಪೂಜಾರಿ, ಬಿ.ಜಿ. ಸುವರ್ಣ, ಎಂ. ಶೇಖರ್ ಪೂಜಾರಿ, ರಮಾನಾಥ್ ಕಾರಂದೂರು, ಜತಿನ್ ಅತ್ತಾವರ, ರಾಧಾಕೃಷ್ಣ, ಡಿ.ಡಿ. ಕಟ್ಟೆಮಾರ್, ಡಾ. ಅನಸೂಯಾ ಸಾಲ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News