ಉಳ್ಳಾಲದಲ್ಲಿ ಹೊಡೆದಾಟ, ಗುಂಡು ಹಾರಾಟ ಪ್ರಕರಣ: ಹಲವರ ಬಂಧನ

Update: 2019-09-23 04:11 GMT

ಉಳ್ಳಾಲ, ಸೆ.23: ಇಲ್ಲಿನ ಮುಕ್ಕಚ್ಚೇರಿ ಸಮೀಪದ ಕಡಪರ ಎಂಬಲ್ಲಿ ರವಿವಾರ ತಡರಾತ್ರಿ ಎರಡು ತಂಡಗಳ ನಡುವಿನ ಹೊಡೆದಾಟ ಹಾಗೂ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಘಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹಾಗೂ ಕಡಪರ ನಿವಾಸಿ ಇರ್ಶಾದ್(20) ಎಂವರು ಗಾಯಗೊಂಡಿದ್ದಾರೆ.
ವಾಟ್ಸ್‌ಆ್ಯಪ್‌ನಲ್ಲಿ ಹರಡಿದ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಕಡಪರ ನಿವಾಸಿ ಸಲ್ಮಾನ್ ಎಂಬವರ ತಂಡಗಳ ನಡುವೆ ಈ ಹೊಡೆದಾಟ ನಡೆದಿದೆ.

ಆರಂಭದಲ್ಲಿ ವಾಟ್ಸ್‌ಆ್ಯಪ್ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಸಲ್ಮಾನ್ ನಡುವೆ ಮೊಬೈಲ್ ಫೋನ್ ಮೂಲಕ ಮಾತಿನ ಚಕಮಕಿ ನಡೆದಿದೆ. ಇದು ತಾರಕಕ್ಕೇರಿದ್ದು, ಅತ್ತಾವರ ನಿವಾಸಿಯಾಗಿರುವ ಸುಹೈಲ್ ಕಂದಕ್ ಮತ್ತು ತಂಡ ರಾತ್ರಿ 11:30ರ ಸುಮಾರಿಗೆ ಕಡಪರಕ್ಕೆ ತೆರಳಿದ್ದು, ಅಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವೇಳೆ ಸುಹೈಲ್ ಕಂದಕ್ ಗುಂಡು ಹಾರಾಟ ನಡೆಸಿದ್ದು, ಇದರಿಂದ ಇರ್ಶಾದ್ ಕಾಲಿಗೆ ಗಾಯಗಳಾಗಿವೆ. ಇದೇವೇಳೆ ಸಲ್ಮಾನ್ ಮತ್ತು ತಂಡ ಸುಹೈಲ್ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ಇದರಿಂದ ಅವರು ಕೂಡಾ ಗಾಯಗೊಂಡಿದ್ದಾರೆ. ಶೂಟೌಟ್ ನಡೆಸಿದ ಆಯುಧವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೂರು, ಪ್ರತಿದೂರು
ಪ್ರಕರಣಕ್ಕೆ ಸಂಬಂಧಿಸಿ, ದೂರು, ಪ್ರತಿದೂರುಗಳು ದಾಖಲಾಗಿವೆ. ಇರ್ಶಾದ್ ನೀಡಿರುವ ದೂರಿನನ್ವಯ ಬಶೀರ್, ಸುಹೈಲ್ ಕಂದಕ್ ಮತ್ತು ತಂಡದ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಹಲವರನ್ನು ಬಂಧಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಸುಹೈಲ್ ಕಂದಕ್ ನೀಡಿರುವ ದೂರಿನ್ವಯ ಸಲ್ಮಾನ್ ಮತ್ತು 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹಲವರನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News