ವಿವಿಪ್ಯಾಟ್‌ಗಳನ್ನು ಹ್ಯಾಕ್ ಮಾಡಬಹುದು: ಮಾಜಿ ಐಎಎಸ್ ಅಧಿಕಾರಿ ಗೋಪಿನಾಥನ್

Update: 2019-09-24 17:42 GMT

ಹೊಸದಿಲ್ಲಿ, ಸೆ, 24: ಹೆಚ್ಚುತ್ತಿರುವ ಭ್ರಮನಿರಸನ,ವಿಶೇಷವಾಗಿ ಜಮ್ಮು-ಕಾಶ್ಮೀರದಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ಉಲ್ಲೇಖಿಸಿ ಇತ್ತೀಚಿಗೆ ಸೇವೆಗೆ ರಾಜೀನಾಮೆ ಸಲ್ಲಿಸಿರುವ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ವಿವಿಪ್ಯಾಟ್ ಯಂತ್ರಗಳ ಅನುಷ್ಠಾನದೊಂದಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತಿದ್ದಾರೆ.

ವಿವಿಪ್ಯಾಟ್ ಯಂತ್ರಗಳಿಂದಾಗಿ ಚುನಾವಣಾ ಪ್ರಕ್ರಿಯೆಯು ಹೇಗೆ ಸುಲಭಭೇದ್ಯವಾಗಿದೆ ಮತ್ತು ಕನ್ನ ಹಾಕಲು ಅವಕಾಶ ಕಲ್ಪಿಸಿದೆ ಎನ್ನುವುದನ್ನು ಸರಣಿ ಟ್ವೀಟ್‌ಗಳ ಮೂಲಕ ಅವರು ವಿವರಿಸಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳ ಮೂಲಕ ಸುರಕ್ಷಿತವಾಗಿದ್ದ ಮತದಾನ ಪ್ರಕ್ರಿಯೆಯಲ್ಲಿ ವಿವಿಪ್ಯಾಟ್‌ಗಳನ್ನು ಸೇರ್ಪಡೆಗೊಳಿಸುವ ಮೂಲಕ ಅದನ್ನು ದುರ್ಬಲಗೊಳಿಸಲಾಗಿದೆ ಎಂದಿರುವ ಅವರು,ಈ ಸಮಸ್ಯೆಯನ್ನು ತುರ್ತಾಗಿ ನಿವಾರಿಸುವ ಅಗತ್ಯವಿದೆ ಎಂದಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವನ್ನು ನೀಡಕೂಡದು ಎಂದೂ ಅವರು ಟ್ವೀಟಿಸಿದ್ದಾರೆ.

ಇವಿಎಮ್‌ಗಳನ್ನು ತಾನು ಈಗಲೂ ಸಮರ್ಥಿಸುತ್ತೇನೆ. ಆದರೆ ವಿವಿಪ್ಯಾಟ್ ಅವುಗಳ ರಕ್ಷಾಕವಚದಲ್ಲಿ ರಂಧ್ರವನ್ನುಂಟು ಮಾಡಿದೆ ಮತ್ತು ಹ್ಯಾಕಿಂಗ್‌ನ್ನು ಸುಲಭವಾಗಿಸಿದೆ ಎಂದಿರುವ ಗೋಪಿನಾಥನ್ ತನ್ನ ಟ್ವೀಟ್‌ಗಳನ್ನು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಕುರೇಷಿ ಮತ್ತು ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಗೋಪಿನಾಥನ್ ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ವಕ್ತಾರರು ಈ ವಿಷಯದಲ್ಲಿ ಮಾಹಿತಿಗಳಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News