ಕೆಐಒಸಿಎಲ್‌ನಿಂದ ದೇವದಾರಿಯಲ್ಲಿ ಗಣಿಗಾರಿಕೆ: ಎಂ.ವಿ. ಸುಬ್ಬರಾವ್

Update: 2019-10-01 12:27 GMT

ಮಂಗಳೂರು, ಅ.1: ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್)ಯು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಎಂಬಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿಸಿದ್ದು, ಸರಕಾರದ ಶಾಸನಬದ್ಧ ಅನುಮತಿಗಾಗಿ ಕಳುಹಿಸಲಾಗಿದೆ ಎಂದು ಕಂಪೆನಿಯ ಸಿಎಂಡಿ ಎಂ.ವಿ. ಸುಬ್ಬರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಕುರಿತು ಈಗಾಗಲೇ ವಿವರವಾದ ಅಧ್ಯಯನ ವರದಿಯನ್ನು ಪರಿಸರ ಸಂರಕ್ಷಣೆ ಮತ್ತು ಅರಣ್ಯ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಸಾರ್ವಜನಿಕ ವಿಚಾರಣೆಯನ್ನೂ ನಡೆಸಲಾಗಿದೆ. ಸರ್ಕಾರದ ಅನುಮತಿ ದೊರಕಿದ ಮೇಲೆ ವಾರ್ಷಿಕವಾಗಿ 2 ಮೆಟ್ರಿಕ್ ಟನ್ ಮೇಲ್ದರ್ಜೆಗೇರಿಸುವ ಕಚ್ಛಾ ಅದಿರು ಮತ್ತು ವಾರ್ಷಿಕ 2 ಮೆಟ್ರಿಕ್ ಟನ್ ಅದಿರನ್ನು ಉಂಡೆ ಕಟ್ಟುವ ಸ್ಥಾವರಕ್ಕೆ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

2018-19ನೇ ಸಾಲಿನಲ್ಲಿ ಕೆಐಒಸಿಎಲ್ ಸುಮಾರು 2012.68 ಕೋಟಿ ರೂ. ವಹಿವಾಟು ನಡೆಸಿದ್ದು, 184.12 ಕೋಟಿ ರೂ. ಲಾಭ ದಾಖಲಿಸುವ ಮೂಲಕ ಶೇ.114ರಷ್ಟು ಹೆಚ್ಚಿನ ಗುರಿ ಸಾಧನೆ ಮಾಡಲಾಗಿದೆ. ತೆರಿಗೆ ಪಾವತಿ ಬಳಿಕ 111.86 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2005ರಲ್ಲಿ ಕುದುರೆಮುಖ

ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಅತಿ ಹೆಚ್ಚು ಉಂಡೆ ಕಬ್ಬಿಣ ಅಂದರೆ 1.52 ಮಿಲಿಯನ್ ಟನ್‌ಗಳಷ್ಟು ರಫ್ತು ಮಾಡಲಾಗಿದೆ ಎಂದು ವಿವರಿಸಿದರು.

ಕೆಐಒಸಿಎಲ್ ಕಂಪೆನಿಗೆ ಕಚ್ಚಾವಸ್ತು ಪೂರೈಕೆ ಮತ್ತು ಮಾರುಕಟ್ಟೆ ವ್ಯವಹಾರಗಳಲ್ಲಿ ಕೈಜೋಡಿಸಿರುವ ರಾಷ್ಟ್ರೀಯ ಇಸ್ವಾತ್ ನಿಗಮದೊಂದಿಗೆ ವಾರ್ಷಿಕ 2 ಮೆ.ಟನ್ ಸಾಮರ್ಥ್ಯದ ಕಬ್ಬಿಣದುಂಡೆಗಳ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಂಟಿ ಉದ್ದಿಮೆಯ ಕರಾರುಪತ್ರಕ್ಕೆ ಶೀಘ್ರದಲ್ಲೇ ಒಪ್ಪಂದ ಮಾಡಲಾಗುವುದು ಎಂದರು.

ಸುಮಾರು 2 ಲಕ್ಷ ಟನ್ ಸಾಮರ್ಥ್ಯದ ಡಕ್ಟೈಲ್ ಐಯರ್ನ್ ಸ್ಪನ್ ಪೈಪ್ (ಡಿಐಎಸ್‌ಪಿ) ಸ್ಥಾವರ ಮತ್ತು 1.8 ಲಕ್ಷ ಟನ್ ಉತ್ಪಾದನಾ ಸಾಮರ್ಥ್ಯದ ಕೋಕ್ ಓವನ್ ಸ್ಥಾವರ ಸ್ಥಾಪನೆಗೆ ಡಿಸೆಂಬರ್ ಒಳಗೆ ಮೂಲ ಕೆಲಸಗಳನ್ನು ಪೂರ್ತಿಗೊಳಿಸಲಾಗುವುದು. ಅಲ್ಲದೆ, 10 ಮೆ.ವ್ಯಾ. ಸಾಮರ್ಥ್ಯದ ವಿದ್ಯುಚ್ಛಕ್ತಿ ಉತ್ಪಾದನಾ ಘಟಕವನ್ನೂ ಸ್ಥಾಪಿಸುವ ಉದ್ದೇಶವಿದೆ. ಇವೆಲ್ಲವೂ ಆರಂಭವಾದರೆ 500ರಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ಪರಿಸರ ಸಂರಕ್ಷಣಾ ಇಲಾಖೆಯವರು ಈ ಎಲ್ಲ ಉದ್ದೇಶಿತ ಸ್ಥಾವರಗಳ ಅಧ್ಯಯನ ವರದಿಯನ್ನು ಕೆಎಸ್‌ಪಿಸಿಬಿಗೆ ಸಲ್ಲಿಸಿದ್ದು, ಅಕ್ಟೋಬರ್ 2ನೇ ವಾರದಲ್ಲಿ ಸಾರ್ವಜನಿಕ ವಿಚಾರಣೆ ನಡೆಯಲಿದೆ ಎಂದರು.

ಕಿರಂದೂಲ್- ಬಚೇಲಿಯಿಂದ ಕಚ್ಛಾ ಕಬ್ಬಿಣದ ಅದಿರು ತರಲು ಸಾಗಾಟ ವೆಚ್ಚ ಹೆಚ್ಚಾದರೂ ಕಂಪೆನಿಯು ಉತ್ತಮ ಲಾಭಾಂಶ ಪಡೆದಿದೆ. ಜಾಗತಿಕವಾಗಿ ಜಪಾನ್, ಕೊರಿಯಾ, ಮಲೇಶ್ಯ, ಚೀನಾ ದೇಶಗಳಲ್ಲಿ ಸ್ಥಿರ ಮಾರುಕಟ್ಟೆಗಳನ್ನು ವಿಸ್ತರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಈಗ ಯುನೈಟೆಡ್ ಕಿಂಗ್ಡಮ್‌ನ ಮಾರುಕಟ್ಟೆಯನ್ನೂ ಪ್ರವೇಶಿಸಿದೆ ಎಂದು ಎಂ.ವಿ.ಸುಬ್ಬರಾವ್ ತಿಳಿಸಿದರು.

ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆಯ ನಿಟ್ಟಿನಲ್ಲಿ ಈಗಾಗಲೇ ಬಿಎಫ್‌ಯು ಘಟಕದ ಬಳಿ 1.3 ಮೆ.ವಾ. ಸಾಮರ್ಥ್ಯದ ಸೌರವಿದ್ಯುತ್ ಘಟಕ ಕಾರ್ಯಾರಂಭಗೊಂಡಿದೆ. 2019-20ನೇ ಸಾಲಿನಲ್ಲಿ 5 ಮೆ.ವ್ಯಾ. ಸೌರವಿದ್ಯುತ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೆಐಒಸಿಎಲ್ ಮ್ಯಾನೇಜರ್ (ಎಚ್‌ಆರ್ ಮತ್ತು ಆಡಳಿತ) ಮುರುಗೇಶ್ ಉಪಸ್ಥಿತರಿದ್ದರು.


2.24 ಮಿಲಿಯನ್ ಟನ್ ಉಂಡೆ ಕಬ್ಬಿಣ
2018-19ನೇ ಸಾಲಿನಲ್ಲಿ ಕೆಐಒಸಿಎಲ್ ಕಂಪೆನಿಯು ಒಟ್ಟು 2.24 ಮಿಲಿಯನ್ ಟನ್ ಉಂಡೆ ಕಬ್ಬಿಣವನ್ನು ಉತ್ಪಾದಿಸಿದ್ದು, ಇದರಲ್ಲಿ 2.21 ಮಿ. ಟನ್ ಉಂಡೆ ಕಬ್ಬಿಣವನ್ನು ಮಾರುಕಟ್ಟೆಗೆ ರವಾನಿಸಲಾಗಿದೆ. 1.52 ಮಿ. ಟನ್ ರಫ್ತಾಗಿದೆ. 2005ರಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಕಂಪೆನಿ ಉತ್ಪಾದಿಸಿದ ಉಚ್ಚ ಶ್ರೇಣಿಯ ಉಂಡೆ ಕಬ್ಬಿಣ ಇದಾಗಿದೆ. ಇದರಿಂದಾಗಿ ಕಂಪೆನಿಯು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿದೆ, ಉತ್ತಮ ಲಾಭಾಂಶವೂ ಬರುತ್ತಿದೆ. ಜಾಗತಿಕ ಮಾರುಕಟ್ಟೆಯೊಂದಿಗೆ ಕರಾವಳಿಯ ಸ್ಥಳೀಯ ಮಾರುಕಟ್ಟೆಯ ಬೇಡಿಕೆಯನ್ನೂ ನಿಭಾಯಿಸಲಾಗುತ್ತಿದೆ ಎಂದು ಎಂ.ವಿ. ಸುಬ್ಬರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News