'ಜೈ ಶ್ರೀರಾಂ' ಹೇಳುವಂತೆ ದಂಪತಿಯನ್ನು ಒತ್ತಾಯಿಸಿದ ಇಬ್ಬರು ದುಷ್ಕರ್ಮಿಗಳ ಬಂಧನ

Update: 2019-10-06 17:42 GMT

ಹೊಸದಿಲ್ಲಿ, ಅ.6: ದಂಪತಿಯನ್ನು ತಡೆದು 'ಜೈ ಶ್ರೀರಾಂ' ಹೇಳುವಂತೆ ಒತ್ತಾಯಿಸಿದ ಇಬ್ಬರು ದುಷ್ಕರ್ಮಿಗಳನ್ನು ರವಿವಾರ ಬಂಧಿಸಲಾಗಿದೆ. ರಾಜಸ್ಥಾನದ ಆಲ್ವಾರ್ ನಲ್ಲಿ ಈ ಘಟನೆ ನಡೆದಿದೆ.

ಇಬ್ಬರೂ ದುಷ್ಕರ್ಮಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 18ರವರೆಗೆ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರಾತ್ರಿ 11:30ರ ಸುಮಾರಿಗೆ ರಾತ್ರಿ ವೇಳೆ ಈ ದಂಪತಿ ಆಲ್ವಾರ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ಸಂದರ್ಭ ಬೈಕ್ ನಲ್ಲಿ ಬಂದ ಇಬ್ಬರು ದಂಪತಿಗೆ ಕಿರುಕುಳ ನೀಡಲು ಆರಂಭಿಸಿದರು. "ಇವರಿಬ್ಬರೂ 'ಜೈ ಶ್ರೀ ರಾಮ್' ಹೇಳುವಂತೆ ದಂಪತಿಯನ್ನು ಬಲವಂತಪಡಿಸಿದ್ದಲ್ಲದೆ, ಓರ್ವ ಮಹಿಳೆಯ ಮುಂದೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಹಿಳೆಯ ಜೊತೆ ದುಷ್ಕರ್ಮಿಯೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದಾಗ ದಾರಿಹೋಕರು ಮಧ್ಯಪ್ರವೇಶಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಟ್ವಾಲಿ ಪೊಲೀಸ್ ಠಾಣೆಗೆ ಇಬ್ಬರನ್ನೂ ಕರೆದೊಯ್ಯಲಾಗಿದೆ" ಎಂದವರು ಹೇಳಿದ್ದಾರೆ.

ಬಂಧಿತರನ್ನು ವಂಶ್ ಭಾರದ್ವಾಜ್ ಮತ್ತು ಸುರೇಂದ್ರ ಮೋಹನ್ ಭಾಟಿಯಾ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News