ಉಪ್ಪಿನಂಗಡಿ: ರಸ್ತೆ ದುರಸ್ಥಿಗೆ ಒತ್ತಾಯಿಸಿ ಪ್ರತಿಭಟನೆ

Update: 2019-10-10 16:37 GMT

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿಯ ಅಡ್ಡಹೊಳೆಯಿಂದ ಬಿ.ಸಿ. ರೋಡ್ ತನಕ ರಸ್ತೆ ಚತುಷ್ಫಥ ಕಾಮಗಾರಿ ಸಲುವಾಗಿ ಅಗೆದು ಹಾಕಲಾಗಿದ್ದು, ರಸ್ತೆಯ ಉದ್ದಕ್ಕೂ ಹೊಂಡ-ಗುಂಡಿ ನಿರ್ಮಾಣ ಆಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಕುಲಗೆಟ್ಟು ಹೋಗಿದೆ, ಶೀಘ್ರವಾಗಿ ಚತುಷ್ಫಥ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಳು ಮತ್ತು ತಕ್ಷಣಕ್ಕೆ ರಸ್ತೆಯನ್ನು ದುರಸ್ಥಿ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೆಲ್ಯಾಡಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು. 

 ನೆಲ್ಯಾಡಿ ಗಾಂಧಿ ಮೈದಾನದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ನೆಲ್ಯಾಡಿ ಪೇಟೆ ತನಕ ಮೆರವಣಿಗೆಯಲ್ಲಿ ಸಾಗಿ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು. 3 ವರ್ಷದ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಎಲ್. ಆ್ಯಂಡ್ ಟಿ. ಸಂಸ್ಥೆ ರಸ್ತೆಯನ್ನು ಅಗೆದು ಹಾಕಿದ್ದು, ಅನೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ಉಂಟಾಗಿ ಪ್ರಾಣ ಹಾಗೂ ಸೊತ್ತುಗಳಿಗೆ ಹಾನಿ ಉಂಟಾಗಿದೆ.

ಅದಾಗ್ಯೂ ಗುಡ್ಡ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ಅಗೆದು ಹಾಕಲಾಗಿದ್ದು, ಗುಡ್ಡ ಕುಸಿತ ಹಾಗೂ ರಸ್ತೆಯ ಅಂಚಿನಲ್ಲಿರುವ ಮರಗಳು ರಸ್ತೆಗೆ ಉರುಳಿ ಬಿದ್ದು ವಾಹನ ಸವಾರರಿಗೆ ಪ್ರಾಣಭೀತಿ ಹಾಗೂ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಈದೀಗ ಕೆಲ ದಿನಗಳಿಂದ ಹೊಂಡ ಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದ್ದು, ಇದು ನಾಮಕಾವಸ್ತೆ ರೀತಿಯಲ್ಲಿ ಕಳಪೆ ಗುಣಮಟ್ಟದಿಂದ ಮಾಡುತ್ತಿದ್ದು, ಹೀಗಾಗಿ ರಸ್ತೆಗೆ ಹಾಕಿರುವ ಜಲ್ಲಿಕಲ್ಲು ಎದ್ದು ದ್ವಿಚಕ್ರ ವಾಹನ ಮತ್ತು ಲಘು ವಾಹನ ಸಂಚಾರ ಕಷ್ಠವಾಗುತ್ತಿದೆ. ಆದ ಕಾರಣ ಶೀಘ್ರವಾಗಿ ರಸ್ತೆಯನ್ನು ಸುವ್ಯವಸ್ಥಿತವಾಗಿ ಚತುಷ್ಫಥ ಕಾಮಗಾರಿ ನಡೆಸಬೇಕು, ಅದಾಗ್ಯೂ ತಕ್ಷಣಕ್ಕೆ ಒಳ್ಳೆಯ ಗುಣಮಟ್ಟದಲ್ಲಿ ಸಂಚಾರ ಯೋಗ್ಯ ರಸ್ತೆಯಾಗಿ ದುರಸ್ಥಿ ಮಾಡಿಕೊಡಬೇಕು ಎಂಬ ಆಗ್ರಹ ವ್ಯಕ್ತವಾಯಿತು.

ನೆಲ್ಯಾಡಿ ಚರ್ಚ್ ಧರ್ಮಗುರು ಆದರ್ಶ ಜೋಸೆಫ್ ಮಾತನಾಡಿ ರಸ್ತೆ ದುರವಸ್ಥೆಯಿಂದಾಗಿ ಹಲವು ಸಾವು-ನೋವು ಸಂಭವಿಸಿದೆ. ಕುಲಗೆಟ್ಟು ಹೋಗಿರುವ ರಸ್ತೆ ನಮ್ಮ ಬದುಕನ್ನೇ ನುಂಗಿ ಬಿಡುತ್ತಿದೆ, ಇಷ್ಟೆಲ್ಲಾ ಸಮಸ್ಯೆ ಇದ್ದರೂ ಅಧಿಕಾರಿಗಳು ತೀರಾ ನಿರ್ಲಕ್ಷತನ ತೋರುತ್ತಿದ್ದಾರೆ. ಇನ್ನಷ್ಟು ಪ್ರಾಣ ಹಾನಿ ಆಗುವ ಮುನ್ನ ಅಧಿಕಾರಿಗಳು ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಸಂಚಾಲಕ ಅಬ್ರಾಹಂ ವರ್ಗಿಸ್ ಮಾತನಾಡಿ ಗುತ್ತಿಗೆದಾರರು ರಸ್ತೆಯನ್ನು ಅಗೆದು ಹಾಕಿದ್ದು ಎಲ್ಲೆಂದರಲ್ಲಿ ಬಂಡೆ ಕಲ್ಲುಗಳು ರಸ್ತೆ ಬದಿಯಲ್ಲಿ ಬಿದ್ದುಕೊಂಡಿದೆ, ರಸ್ತೆ ಅವ್ಯವಸ್ಥೆಯಿಂದಾಗಿ ಬಡವರ ಹಣ, ಜೀವ ನಷ್ಟ ಆಗುತ್ತಿದೆ, ಹೆದ್ದಾರಿ ಇಲಾಖೆ ಇಲ್ಲಿನ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು, ಇದು ಸಾಂಕೇತಿಕ ಪ್ರತಿಭಟನೆ ಆಗಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವೃ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಮಾತನಾಡಿ ಗುಂಡ್ಯದಿಂದ ಹಿಡಿದು ಉಪ್ಪಿನಂಗಡಿ ತನಕ ಸಾವಿರಾರು ತೀರಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ರಸ್ತೆಯನ್ನು ಅವಲಂಭಿಸಿ ಶಾಲೆ, ಕಾಲೇಜುಗಳಿಗೆ ಬರುವವರಿದ್ದಾರೆ. ಆದರೆ ಅವರು ರಸ್ತೆ ಅವ್ಯವಸ್ಥೆಯಿಂದಾಗಿ ಪ್ರತಿ ದಿನವೂ ಶಾಲೆಗೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ, ಅದೆಷ್ಟೋ ಉದ್ಯೋಗಿಗಳು, ಕೂಲಿ ಕಾರ್ಮಿಕರು ಇಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಅಧಿಕಾರಿಗಳು ಸ್ಪಂಧಿಸಿ ರಸ್ತೆ ದುರಸ್ಥಿ ಮಾಡದಿದ್ದಲ್ಲಿ ಮುಂದೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ವರ್ಗೀಸ್ ಕೈಕುನಡ್ಕ, ನೆಲ್ಯಾಡಿ ವರ್ತಕ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ, ನೆಲ್ಯಾಡಿ ಗ್ರಾಮ ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ, ಮಾಜಿ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ, ಹೋರಾಟ ಸಮಿತಿ ಕಾರ್ಯದರ್ಶಿ ಜೋಸ್ ಮಾತನಾಡಿದರು.

ಜಿಲ್ಲಾ ಪಂ. ಸದಸ್ಯ ಸರ್ವೋತ್ತಮ ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಉಷಾ ಅಂಚನ್, ಹೋರಾಟ ಸಮಿತಿ ಪದಾಧಿಕಾರಿಗಳಾದ ಕೆ.ಪಿ. ತೋಮಸ್, ಸೆಬಾಸ್ಟಿಯನ್, ಸೆಯ್ಯದ್ ಮೀರಾ ಸಾಹೇಬ್ ಕಡಬ, ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು. 

ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿ ಕಾಮರಾಜ್ ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಮಾತನಾಡಿ ಈ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೆಲಸ ನಿರ್ವಹಿಸಲು ಸಮಸ್ಯೆ ಉಂಟಾಗಿತ್ತು. ಈಗಾಗಲೇ ದುರಸ್ಥಿ ಕಾಮಗಾರಿ ಆರಂಭಿಸಲಾಗಿದ್ದು, ಅಕ್ಟೋಬರ್ ತಿಂಗಳ ಅಂತ್ಯದ ಒಳಗಾಗಿ ಇನ್ನು 3 ವಾರಗಳ ಒಳಗಾಗಿ ರಸ್ತೆ ಸಂಪೂರ್ಣವಾಗಿ ದುರಸ್ಥಿ ಆಗಲಿದೆ. ಅದಾಗ್ಯೂ ಎಲ್ ಆ್ಯಂಡ್ ಟಿ ಸಂಸ್ಥೆಯವರು ಚತುಷ್ಫಥ ಕಾಮಗಾರಿಯನ್ನು ಆರಂಭಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News