ಡಿ.ಕೆ ಶಿವಕುಮಾರ್ ಪತ್ನಿ, ತಾಯಿ ಸದ್ಯ ಹಾಜರಾಗುವ ಅಗತ್ಯವಿಲ್ಲ: ಈ.ಡಿ

Update: 2019-10-16 15:12 GMT

ಹೊಸದಿಲ್ಲಿ,ಅ.16: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕರ್ನಾಟಕ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರ ಪತ್ನಿ ಮತ್ತು ತಾಯಿ ಸದ್ಯಕ್ಕೆ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಬುಧವಾರ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿರುವ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಮತ್ತು ತಾಯಿ ಗೌರಮ್ಮ ಅವರ ಎರಡು ಪ್ರತ್ಯೇಕ ಮನವಿಗಳಿಗೆ ಪ್ರತಿಕ್ರಿಯಿಸಿದ ಜಾರಿ ನಿರ್ದೇಶನಾಲಯ ಈ ಹೇಳಿಕೆ ನೀಡಿದೆ.

ಗೌರಮ್ಮ ಮತ್ತು ಉಷಾ ಅವರು ಕ್ರಮವಾಗಿ ಅಕ್ಟೋಬರ್ 15 ಮತ್ತು 17ರಂದು ಹಾಜರಾಗುವಂತೆ ಈ.ಡಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಗೌರಮ್ಮ ತನಿಖಾ ಸಂಸ್ಥೆಯ ಎದುರು ಹಾಜರಾಗಿರಲಿಲ್ಲ. ಉಷಾ ಮತ್ತು ಗೌರಮ್ಮ ವಿರುದ್ಧ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲಾಗುವುದು. ಇದಕ್ಕೆ ಕನಿಷ್ಟ ಏಳು ಕೆಲಸದ ದಿನಗಳ ಸಮಯ ತಗಲಲಿದೆ. ಹಾಗಾಗಿ ಅವರು ಸದ್ಯ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ಈ.ಡಿ ಪರ ವಕೀಲರು ನ್ಯಾಯಾಧೀಶ ಬ್ರಿಜೇಶ್ ಸೇಥಿಗೆ ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಪರ ವಾದಿಸಿದ ಕೇಂದ್ರ ಸರಕಾರದ ಸಹಾಯಕ ವಕೀಲ ಕೀರ್ತಿಮಾನ್ ಸಿಂಗ್ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News