ಲಿಂಚಿಂಗ್: ನವ ಭಾರತದ ಯಾತನೆ

Update: 2019-10-21 05:14 GMT

ಗೋ-ಸಂಬಂಧಿತ ದಾಳಿಗಳಲ್ಲಿ ಹತ್ಯೆಗೈಯಲ್ಪಟ್ಟವರಲ್ಲಿ ಶೇ.86 ಮಂದಿ ಮುಸ್ಲಿಮರೆಂಬುದು ಕೇವಲ ಕಾಕತಾಳೀಯವಾಗಲು ಸಾಧ್ಯವಿಲ್ಲ. ಗುಂಪು ಥಳಿತದಲ್ಲಿ ತೊಡಗುವವರನ್ನು ರಕ್ಷಿಸಲು ಇನ್ನಷ್ಟು ಕಠಿಣ ಕಾಯ್ದೆಗಳನ್ನು ತರಬಹುದೆಂಬ ಭಾಗವತ್‌ರ ವಾದ ವಿಶ್ವಸನೀಯವಲ್ಲ. ಯಾಕೆಂದರೆ, ಗುಂಪು ಥಳಿತದ ಹೆಚ್ಚಿನ ಪ್ರಕರಣಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆಯುತ್ತವೆ.

2014ರಲ್ಲಿ ನರೇಂದ್ರ ಮೋದಿಯವರು ಚುನಾಯಿತರಾದ ನಂತರದ ವರ್ಷಗಳಲ್ಲಿ ಕೊಳಕು ಗುಂಪು ದ್ವೇಷ ದೇಶದ ಬೀದಿಗಳಿಗೆ, ಹಳ್ಳಿಗಳಿಗೆ ಹಾಗೂ ಜನರ ಮನೆಗಳಿಗೆ ಹರಡಿತು.

ಆವೇಶಭರಿತ ಗುಂಪುಗಳು ಒಟ್ಟಾಗುತ್ತವೆ, ಬರ್ಬರವಾಗಿ ದಾಳಿ ಮಾಡುತ್ತವೆ. ಮತ್ತು ಒಮ್ಮಾಮ್ಮೆ ನಿರಾಯುದರಾದ ಜನರನ್ನು, ಬಹುತೇಕ ಮುಸ್ಲಿಮರನ್ನು ಹತ್ಯೆಗೈಯುತ್ತವೆ. ಹಾಗೆ ಥಳಿತಕ್ಕೊಳಗಾದವರು ಹಸುಗಳನ್ನು ಹೊಂದಿದ್ದರು; ಅಥವಾ ಅವರು ಕಳ್ಳರು ಎಂದು ಗುಂಪುಗಳು ಆಪಾದಿಸುತ್ತವೆ.ಆದರೆ ಒಮ್ಮೊಮ್ಮೆ ದಿಲ್ಲಿಯ ಸಮೀಪ ಜನದಟ್ಟಣೆ ಇದ್ದ ಒಂದು ಟ್ರೈನ್‌ನಲ್ಲಿ ಮಗುವೊಂದನ್ನು ಇರಿದು ಕೊಂದ ಹಾಗೆ, ಥಳಿತಕ್ಕೊಳಗಾಗುವವರ ಏಕೈಕ ಅಪರಾಧವೆಂದರೆ ಅವರು ಮುಸ್ಲಿಮರಾಗಿರುವುದು.

ನಾವು ಈ ಗುಂಪು ಹತ್ಯೆಗಳನ್ನು ಲಿಂಚಿಂಗ್ ಎಂದು ವಿವರಿಸುತ್ತೇವೆ. ಮೋದಿ ಆಡಳಿತದಲ್ಲಿ ಏರೋತ್ತಲೇ ಹೋದ ಈ ಭಯಾನಕ ಲಿಂಚಿಂಗ್ ಘಟನೆಗಳಿಗೆ ಸರಕಾರದ ಮೊದಲ ಪ್ರತಿಕ್ರಿಯೆ ನಿರಾಕರಣೆಯಾಗಿತ್ತು: ಭಾರತೀಯ ಜನತಾ ಪಕ್ಷದ (ಬಿಜೆಪಿ) ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರೆಸ್ಸೆಸ್ ಎರಡೂ ಕೂಡಾ ಈ ಗುಂಪು ಥಳಿತಗಳು ಕಾನೂನು ಮತ್ತು ವ್ಯವಸ್ಥೆಯ ಸರಳ ವೈಫಲ್ಯಗಳು; ಪ್ರತಿಯೊಂದು ಸರಕಾರದ ಆಡಳಿತದಲ್ಲೂ ನಡೆದಿದ್ದ ಸಾಮಾನ್ಯ ಅಪರಾಧಗಳು ಎಂದು ವಾದಿಸಿದವು ಶ್ರೀ ಮೋದಿಯವರ ನಾಯಕತ್ವವನ್ನು ವಿರೋಧಿಸುವ ಸ್ವಹಿತಾಸಕ್ತ ಶಕ್ತಿಗಳೂ ಈ ಬೆಳವಣಿಗೆಯ, ಆಗೊಮ್ಮೆ ಈಗೊಮ್ಮೆ ಹಾಗೂ ಸ್ವಯಂಸ್ಫೂರ್ತಿಯಾಗಿ ನಡೆಯುವ ಅಪರಾಧಗಳಿಗೆ ಒಂದು ಮಾದರಿಯನ್ನು ಆರೋಪಿಸಿ ಇವುಗಳನ್ನು ಲಿಂಚಿಂಗನ ಒಂದು ಸಾಂಕ್ರಾಮಿಕವೆಂದು ಕರೆದವು ಎಂದೂ ಬಿಜೆಪಿ ಹಾಗೂ ಆರೆಸ್ಸೆಸ್ ವಾದಿಸಿದವು.

 ಆದರೆ ಅವುಗಳ ಈ ವಾದ,ಸ್ವರಕ್ಷಣೆಯ ಕೋಟೆ ದೇಶದ ಬಹು ಭಾಗಗಳು ಮುಂದುವರಿದಂತೆ ಕುಸಿಯಲಾರಂಭಿಸಿತು. ಅವುಗಳ ಎರಡನೆಯ ವಾದ ಹೀಗಿತ್ತು: ಮುಸ್ಲಿಮರು ಗೋ ಸಾಕಣೆ ಹಾಗೂ ಗೋ ಹತ್ಯೆಯನ್ನು ಮುಂದುವರಿಸಿದ್ದರಿಂದಲೇ ಈ ದಾಳಿಗಳು ನಡೆದವು ಅವರು ತಮ್ಮ ಹಿಂದೂ ನೆರೆಕರೆಯವರ ಭಾವನೆಗಳ ಬಗ್ಗೆ ನಿರ್ಲಕ್ಷ ತಾಳಿದ್ದರೂ ಈ ವಾದದ ಪ್ರಕಾರ, ಹಿಂದೂಗಳ ಭಾವನೆಗಳನ್ನು ಕೆರಳಿಸಲಾಯಿತು. ಸಾಮಾನ್ಯವಾಗಿ ಹಿಂಸೆಗೆ ಇಳಿಯುವ ಹಿಂದೂಗಳು ಒಮ್ಮೆಮ್ಮೆ ತಾಳ್ಮೆಯ ರೇಖೆಯನ್ನು ದಾಟುತ್ತಾರೆ. ಇದು ವಿಷಾದನೀಯ. ಆದರೆ ಏನು ಮಾಡುವುದು? ಇದು ಸಹಜ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಬಹುಸಂಖ್ಯಾತ ಹಿಂದೂ ಸಮಾಜದ ಭಾವನೆಗಳನ್ನು ಗೌರವಿಸಲು ಕಲಿತಾಗ ಮತ್ತು ಗೋ ಹತ್ಯೆ ನಿಲ್ಲಿಸಿದಾಗ ಇಂತಹ ಹಿಂಸೆ ಕೊನೆಗೊಳ್ಳುತ್ತದೆ.

 ಈ ವಾದದಲ್ಲಿ ಹಲವಾರು ತಪ್ಪುಗಳಿವೆ, ದೋಷಗಳಿವೆ. ಹಾಲು ನೀಡದ ಹಸುಗಳನ್ನು ಸಾಕುವುದು ಅನುತ್ಪಾದಕವಾಗಿದ್ದರಿಂದ ದಲಿತರು ಮತ್ತು ಆದಿವಾಸಿಗಳೂ ಸೇರಿದಂತೆ, ರೈತರು ತಮ್ಮ ಮುದಿ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುತ್ತಾರೆ. ಮುಸ್ಲಿಂ ಹಾಲಿನ ಡೈರಿ ರೈತರು ಕೂಡ ಹೀಗೆಯೇ ಮಾಡುತ್ತಾರೆ ಮತ್ತು ಬಹುಪಾಲು ಗುಂಪು ಥಳಿತ ಪ್ರಕರಣಗಳಲ್ಲಿ (ಉದಾ:ಪೆಹ್ಲೂಖಾನ್) ಹಸುಗಳನ್ನು ಹಾಲಿನ ಡೈರಿಯ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತೇ ಹೊರತು ಅವುಗಳನ್ನು ವಧಿಸಲಿಕ್ಕಾಗಿ ಅಲ್ಲ ಎಂಬುದನ್ನು ನಾವು ಗಮನಿಸಬೇಕು. ಅಲ್ಲದೆ ಈಗಿನ ಸರಕಾರದ ಆಡಳಿತದ ಅವಧಿಯಲ್ಲಿ ದೇಶದ ಹಲವಾರು ಭಾಗಗಳಲ್ಲಿ ಗುಂಪು ಥಳಿತ ಪ್ರಕರಣಗಳಲ್ಲಿ ಯಾಕೆ ದಿಢೀರನೆ ಹೆಚ್ಚಳವಾಯಿತು ಎಂಬುದಕ್ಕೆ ಯಾವ ವಿವರಣೆಯೂ ಇಲ್ಲ. (2010ರ ಬಳಿಕ ನಡೆದ ಒಟ್ಟು ಗುಂಪು ಥಳಿತ ಪ್ರಕರಣಗಳಲ್ಲಿ 98% ಪ್ರಕರಣಗಳು 2014ರ ಬಳಿಕ ನಡೆದ ಪ್ರಕರಣಗಳು ಎಂಬುದನ್ನು ನಾವು ಮರೆಯಕೂಡದು.

ದಸರಾ ಸಮಾರಂಭದ ಗುಂಪು ತನ್ನ ಭಾಷಣದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಗುಂಪು ಥಳಿತಕ್ಕೆ ಇದಕ್ಕಿಂತ ಹೆಚ್ಚು ಸಮರ್ಥನೆಗಳನ್ನು ವಿವರಣೆಗಳನ್ನು ನೀಡಿದರು. ಬಿಜೆಪಿ ಸರಕಾರಗಳ ಮೇಲೆ ಆರೆಸ್ಸೆಸ್ ಬಹಳ ಪ್ರಭಾವ ಬೀರುವುದರಿಂದ ಅದು ಆರೆಸ್ಸೆಸ್ ಮುಖ್ಯಸ್ಥರಾಗಿರುವ ಅವರ ಮಾತುಗಳನ್ನು ವಿವರವಾಗಿ ಪರೀಕ್ಷಿಸಬೇಕಾಗುತ್ತದೆ. ವಿಶ್ಲೇಷಿಸಬೇಕಾಗುತ್ತದೆ.

ಅವರು ಐದು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದರು:

ಮೊದಲನೆಯದಾಗಿ, ಲಿಂಚಿಂಗ್ ಎಂಬುದು ಭಾರತೀಯ ಪರಂಪರೆಗಳಿಗೆ ಅಪರಿಚಿತವಾಗದ ವಿದೇಶಿ ಬೈಬಲ್ ಯುಗದ ಆಚರಣೆ ಕ್ರಮ. ಎರಡನೆಯದಾಗಿ ಭಾರತೀಯರು ಸಾಂಸ್ಕೃತಿಕವಾಗಿ ಅಹಿಂಸಾವಾದಿಗಳು, ಮೂರನೆಯದಾಗಿ ಈ ಲಿಂಚಿಂಗ್ ಪ್ರಕರಣಗಳಲ್ಲಿ ಆರೆಸ್ಸೆಸ್‌ನ ಯಾವುದೇ ಪಾತ್ರವಿಲ್ಲ ಮತ್ತು ಅದು ಇಂತಹ ಗುಂಪು ಥಳಿತಗಳನ್ನು ತಡೆಯಲು ಪ್ರಯತ್ನಿಸುತ್ತಿದೆ. ನಾಲ್ಕನೆಯದಾಗಿ, ಹಲವು ಸಾಮಾನ್ಯ ಅಪರಾಧಗಳನ್ನು ಲಿಂಚಿಂಗ್ ಎಂದು ತಪ್ಪಾಗಿ ಚಿತ್ರಿಸಲಾಗುತ್ತದೆ. ಐದನೆಯದಾಗಿ, ಅಗತ್ಯ ಕಂಡಲ್ಲಿ, ಇಂತಹ ಘಟನೆಗಳಲ್ಲಿ ಭಾಗಿಯಾಗುವವರನ್ನು ಶಿಕ್ಷಿಸಲು ಕಾನೂನನ್ನು ಇನ್ನಷ್ಟು ಬಲಪಡಿಸಬೇಕು. ಈ ಐದು ಅಂಶಗಳಲ್ಲಿ ಪ್ರತಿಯೊಂದನ್ನು ನಾನೀಗ ವಿವರವಾಗಿ ವಿಶ್ಲೇಷಿಸಬಯಸುತ್ತೇನೆ.

ಬಂಗಾಲಿ ಭಾಷೆಯನ್ನು ಹೊರತುಪಡಿಸಿ ಭಾರತದ ಬಹುತೇಕ ಭಾಷೆಗಳಲ್ಲಿ ಲಿಂಚಿಂಗ್ ಎಂಬುದಕ್ಕೆ ಸಂವಾದಿಯಾದ ಪದ ಇಲ್ಲ.

ಬಹಳ ವರ್ಷಗಳ ಕಾಲ ಕೋಲ್ಕತಾದಲ್ಲಿ ಕಿಸೆಗಳ್ಳರನ್ನು ಗುಂಪು ಥಳಿತಕ್ಕೆ ಗುರಿ ಪಡಿಸುತ್ತಿದ್ದುದರಿಂದ ಬಂಗಾಲಿಯಲ್ಲಿ ಗಣ ಥೊ ಲಾ ಎಂಬ ಶಬ್ದ ಇದೆ. ಆದರೆ ಲಿಂಚಿಂಗ್ ಎಂಬುದು ‘ಭಾರತದ ಹೊರಗೆ ಪವಿತ್ರ ಗ್ರಂಥವನ್ನು ಸೃಷ್ಟಿಸಿದ ಧರ್ಮಗಳು ಆಚರಣೆಗೆ ತಂದ ಒಂದು ಶಿಕ್ಷೆಯ ವಿಧಾನ ಎಂಬ ಶ್ರೀ ಭಾಗವತ್‌ರ ವಾದವು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳ ವಿರುದ್ಧ ಆರೆಸ್ಸೆಸ್ ಹೊಂದಿರುವ ಅಸಹನೆಗೆ ಅನುಗುಣವಾಗಿಯೇ ಇದೆ. ಅವರು ಬೈಬಲ್‌ನಿಂದ ನೀಡುವ ಉದಾಹರಣೆ ನಿಜವಾಗಿ ಪ್ರೀತಿ ಮತ್ತು ಕರುಣೆಯನ್ನು ಬೋಧಿಸಲು ಪ್ರಯತ್ನಿಸುತ್ತದೆಯೇ ಹೊರತು ದ್ವೇಷವನ್ನಲ್ಲ. ಹಾದರ ಮಾಡಿದ ಹೆಂಗಸೊಬ್ಬಳನ್ನು ಕಲ್ಲು ಹೊಡೆದು ಸಾಯಿಸಲು ಹಠತೊಟ್ಟಿರುವ ಒಂದು ಗುಂಪನ್ನು ಉದ್ದೇಶಿಸಿ ಯೇಸುಕ್ರಿಸ್ತ ಹೇಳುತ್ತಾನೆ. ‘ನಿಮ್ಮಲ್ಲಿ ಪಾಪ ಮಾಡುವನು ಇದ್ದಲ್ಲಿ, ಆತ ಅವಳೆಡೆಗೆ ಮೊದಲು ಕಲ್ಲೆಸೆಯಲಿ.’

ಲಿಂಚಿಂಗ್ ಎಂಬ ಶಬ್ದ 10ನೇ ಶತಮಾನದ ಮಧ್ಯಭಾಗದಲ್ಲಿ ಅಮೆರಿಕದಲ್ಲಿ ಮೊದಲಬಾರಿಗೆ ಬಳಕೆಗೆ ಬಂತು. ಇತಿಹಾಸಕಾರರು ಹೇಳುವಂತೆ, ಪ್ಲಾಂಟರ್ ಚಾರ್ಲ್ಸ್ ಲಿಂಚ್ ಎಂಬಾತ ಮೊದಲ ಬಾರಿಗೆ ತನ್ನಂತಹ ಖಾಸಗಿ ವ್ಯಕ್ತಿಗಳು ತಮಗೆ ಇದೆಯೆಂದು ಭಾವಿಸಿದ, ನ್ಯಾಯಾಂಗೇತರ ಅಧಿಕಾರವನ್ನು ವಿವರಿಸಲು ‘ಲಿಂಚಿಂಗ್’ ಶಬ್ಧವನ್ನು ಬಳಸಿದ. ಆ ಬಳಿಕ 14ನೇ ಶತಮಾನದ ಕೊನೆಯಲ್ಲಿ ಗುಂಪುಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ವ್ಯಕ್ತಿಗಳನ್ನು ಥಳಿಸಿ ಕೊಲ್ಲವುದಕ್ಕೆ ಈ ಶಬ್ಧವನ್ನು ಬಳಸಲಾಯಿತು.

ಲಿಂಚಿಂಗ್ ವಿದೇಶೀ ಶಬ್ದವಿರಬಹುದು, ಆದರೆ ಗುಂಪುಹತ್ಯೆ ಭಾರತಕ್ಕೆ ಹೊಸತು ಎಂದು ಇದರ ಅರ್ಥವಲ್ಲ. ಪಿಶಾಚಿ ಹಿಡಿದಿದೆ ಎಂದು ಹೇಳಿ ಏಕಾಏಕಿ ಮಹಿಳೆಯರಿಗೆ ಹಣೆಪಟ್ಟಿ ಅಂಟಿಸಿ (ವಿಚಸ್) ಶತಮಾನಗಳ ಕಾಲದಿಂದ ಇಲ್ಲಿ ಮಹಿಳೆಯರನ್ನು ಗುಂಪು ಹತ್ಯೆಗೆ ಗುರಿಪಡಿಸಲಾಗಿದೆ. ಶತಮಾನಗಳ ಲಾಗಾಯಿತು ದಲಿತರನ್ನು ಬರ್ಬರವಾಗಿ ಹೀಗೆ ಗುಂಪು ಹತ್ಯೆಗೈಯಲಾಗಿದೆ. ಜೈಜಾರ್, ಖೈರ್ಲಾಂಜಿ ಮತ್ತು ವಿನಾ ದಲಿತರನ್ನು ಗುಂಪು ಥಳಿತದಲ್ಲಿ ಹತ್ಯೆಗೈಯಲಾದ ಇತ್ತೀಚಿನ ಮೂರು ಉದಾಹರಣೆಗಳು. ಇತ್ತೀಚಿನ ವರ್ಷಗಳಲ್ಲಿ ಮೀಸೆ ಇಟ್ಟು ಕೊಂಡದ್ದಕ್ಕೆ, ಕುದುರೆ ಸವಾರಿ ಮಾಡಿದ್ದಕ್ಕೆ ಅಥವಾ ಎರಡು ಮಹಡಿಯ ಮನೆ ಕಟ್ಟಿದ ಕಾರಣಕ್ಕೆ ದಲಿತರು ಗುಂಪುಥಳಿತಕ್ಕೊಳಗಾಗಿದ್ದಾರೆ. ಭಾರತೀಯರು ಸಾಂಸ್ಕೃತಿಕವಾಗಿ ಅಹಿಂಸಾವಾದಿಗಳು ಮತ್ತು ಅವರ ಸಂಸ್ಕೃತಿ ಶಾಂತಿಯುತ ಸಹಭಾಳ್ವೆಯನ್ನು ಪ್ರವರ್ತಿಸುತ್ತದೆ ಎಂಬ ಭಾಗವತ್‌ರವಾದ ಕೂಡ ಸಮಕಾಲೀನ ಅಥವಾ ಐತಿಹಾಸಿಕ ವಿಶ್ಲೇಷಣೆಯ ಎದುರು ಹುರುಳಿಲ್ಲದ ವಾದವಾಗಿದೆ. ಕೆಲ ವಿವಾದಗಳನ್ನು ಸಂಧಾನದ ಮೂಲಕ ಪರಿಹರಿಸಿಕೊಳ್ಳಲಾಗುತ್ತಿತ್ತು ಎಂಬ ಅವರ ಉದಾಹರಣೆ ಒಂದು ಕ್ರೂರ ಜೋಕ್ ಅಲ್ಲದೆ ಬೇರೆ ಏನೂ ಅಲ್ಲ. ಯಾಕೆಂದರೆ, ದಲಿತರ ಮೇಲೆ ಕಡೆದ ಹಲವಾರು ಭಯಾನಕ ದಾಳಿಗಳು ಅವರು ನೀರಿನಲ್ಲಿ ತಮಗೂ ಪಾಲು ಬೇಕು ಎಂದಾಗಲೇ ನಡೆದ ದಾಳಿಗಳು. ಇವತ್ತಿಗೂ ಇದು ಸತ್ಯ. ಸಾರ್ವಜನಿಕ ಕೆರೆಯೊಂದರಿಮದ ನೀರು ತೆಗೆಯುವುದಕ್ಕಾಗಿಯೆ ಬಿ.ಆರ್. ಅಂಬೇಡ್ಕರ್ ಒಂದು ಪ್ರಬಲವಾದ ಸಾರ್ವಜನಿಕ ಚಳವಳಿ ನಡೆಸಬೇಕಾಯಿತು.

ಆದರೆ ಆರೆಸ್ಸೆಸ್‌ಗೂ ಗುಂಪು ದಾಳಿಗೂ ಏನೂ ಸಂಬಂಧವಿಲ್ಲ, ಮತ್ತು ಅದು ಗುಂಪು ಥಳಿತವನ್ನು ತಡೆಯಲು ಪ್ರಯತ್ನಿಸುತ್ತದೆ ಎಂಬುದು ಭಾಗವತ್ ಹೇಳಿರುವ ಮಾತುಗಳಲ್ಲಿ ಅತ್ಯಂತ ದೊಡ್ಡ ಸುಳ್ಳು. ಕರವಾನ್ ಎ ಮೊಹಬತ್‌ನೊಂದಿಗೆ ನಾನು 31 ಗುಂಪು ಥಳಿತ ನಡೆದ ಸ್ಥಳಗಳಿಗೆ ಭೇಟಿ ನೀಡಿದಾಗ ಸ್ವಯಂಸ್ಫೂರ್ತಿಯಾಗಿ ಯಾವುದೇ ಗುಂಪು ಥಳಿತ ನಡೆದಿಲ್ಲ ಎಂಬುದನ್ನು ಕಂಡುಕೊಂಡಿದ್ದೇನೆ ಮತ್ತು ಯಾವುದೇ ಗುಂಪು ಥಳಿತವನ್ನು ತಡೆಯಲು ಆರೆಸ್ಸೆಸ್ ಅಲ್ಲ, ಯಾರೊಬ್ಬರೂ ಪ್ರಯತ್ನಿಸಿರಲಿಲ್ಲ. ದಾಳಿಕೋರರು ತಮಗೆ ಇರುವ ಉಗ್ರ ಹಿಂದುತ್ವ ನಂಬಿಕೆಗಳ ಬಗ್ಗೆ ಮುಕ್ತವಾಗಿಯೆ ಹೇಳಿಕೊಳ್ಳುತ್ತಾರೆ. ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಗುಂಪು ಥಳಿತಕ್ಕೆ ಗುರಿಯಾಗುವವರು ಮುಸ್ಲಿಮರು; ಹಲವು ಸಂದರ್ಭಗಳಲ್ಲಿ ಇವರನ್ನು ‘‘ಜೈಶ್ರೀರಾಮ್’’ ಎಂದು ಹೇಳುವಂತೆ ಬಲವಂತಪಡಿಸಲಾಗುತ್ತದೆ. ಆರೆಸ್ಸೆಸ್ ಸದಸ್ಯರ ಸದಸ್ಯತ್ವದ ಅಧಿಕೃತ ದಾಖಲೆ ಇಲ್ಲದಿರುವುದರಿಂದ ದಾಳಿ ನಡೆಸಿದವರು ಆರೆಸ್ಸೆಸ್‌ನ ಸದಸ್ಯರೆಂದು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದಾಗ ನಾಥೂರಾಮ್ ಗೋಡ್ಸೆ ಆರೆಸ್ಸೆಸ್‌ನಅಧಿಕೃತ (ಫಾರ್ಮಲ್) ಸದಸ್ಯ ನಾಗಿದ್ದಿರಬಹುದು... ಆದರೆ ಇದು ಗೋಡ್ಸೆ ಮತ್ತು ಆತನ ಸಹಚರರು ಆರೆಸ್ಸೆಸ್‌ನ ಹಿಂದೂ ಶ್ರೇಷ್ಠತ್ವ ಸಿದ್ಧಾಂತದಿಂದ ಪ್ರಭಾವಿತರಾಗಿದ್ದರೆಂಬ ವಾಸ್ತವವನ್ನು ಮುಚ್ಚಿಡಲಾಗದು. ಗುಂಪು ಥಳಿತಗಳು ಸಾಮಾನ್ಯ ಅಪರಾಧಗಳು ಎಂಬ ಭಾಗವತ್‌ರ ಮಾತು ಒಂದು ಹಳೆಯ ತರ್ಕ. ಜನರನ್ನು ಅವರ ಅಸ್ಮಿತೆಗಾಗಿ ದ್ವೇಷ ಅಪರಾಧಕ್ಕೆ ಗುರಿ ಮಾಡುವುದನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಡಲು ಹೂಡುವ ವಾದ ಇದು.

ಗೋ-ಸಂಬಂಧಿತ ದಾಳಿಗಳಲ್ಲಿ ಹತ್ಯೆಗೈಯಲ್ಪಟ್ಟವರಲ್ಲಿ ಶೇ.86 ಮಂದಿ ಮುಸ್ಲಿಮರೆಂಬುದು ಕೇವಲ ಕಾಕತಾಳೀಯವಾಗಲು ಸಾಧ್ಯವಿಲ್ಲ. ಗುಂಪು ಥಳಿತದಲ್ಲಿ ತೊಡಗುವವರನ್ನು ರಕ್ಷಿಸಲು ಇನ್ನಷ್ಟು ಕಠಿಣ ಕಾಯ್ದೆಗಳನ್ನು ತರಬಹುದೆಂಬ ಭಾಗವತ್‌ರ ವಾದ ವಿಶ್ವಸನೀಯವಲ್ಲ. ಯಾಕೆಂದರೆ, ಗುಂಪು ಥಳಿತದ ಹೆಚ್ಚಿನ ಪ್ರಕರಣಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆಯುತ್ತವೆ. ದಾಳಿಕೋರರ ವಿರುದ್ಧ ಕ್ರಮ ಜರುಗಿಸಲು ಈಗಿರುವ ಕಾನೂನುಗಳೇ ಧಾರಾಳವಾಗಿ ಸಾಕು. ಆದರೆ, ಅಪವಾದಗಳೇ ಇಲ್ಲವೆನ್ನುವಂತೆ, ಬಿಜೆಪಿ ಆಡಳಿತವಿರುವ ಈ ಎಲ್ಲ ರಾಜ್ಯಗಳಲ್ಲಿ ಪೊಲೀಸರು ಹತ್ಯೆ ಮಾಡಿದವರನ್ನು ರಕ್ಷಿಸಿ ಬಲಿಪಶುಗಳ ಸಂಬಂಧಿಕರನ್ನೇ ಅಪರಾಧಿಗಳಾಗಿಸಲು ಪ್ರಯತ್ನಿಸುತ್ತಾರೆ.

ಹೀಗೆ ಭಾಗವತ್ ಆರೆಸ್ಸೆಸ್‌ನ ಹಲವು ಹಳೆಯ ವಾದಗಳನ್ನೆ, ಕ್ಲೀಷೆಗಳನ್ನೆ ತನ್ನ ಸಂಘಟನೆಯ ಸಮರ್ಥನೆಗಾಗಿ ಬಳಸಿಕೊಳ್ಳುತ್ತಾರೆ: ಹಿಂಸೆಗೆ ‘ವಿದೇಶೀ ಧರ್ಮಗಳೇ ಕಾರಣವೆಂದು ಅವುಗಳನ್ನು ರಾಕ್ಷಸೀಕರಿಸುವುದು; ಭಾರತೀಯ ಸಂಸ್ಕೃತಿ ಮೂಲತಃ ಶಾಂತಿಪ್ರಿಯ ಎನ್ನುವುದು; ಗುಂಪು ಥಳಿತಕ್ಕೆ ಕುಮ್ಮಕ್ಕು ನೀಡುವುದು, ಅದನ್ನು ಸಂಘಟಿಸುವುದು ಮತ್ತು ಅದೊಂದು ಶೌರ್ಯದ ಕೆಲಸ ಎನ್ನುವುದು, ಇದ್ಯಾವುದರಲ್ಲೂ ಆರೆಸ್ಸೆಸ್‌ಗೆ ಯಾವುದೇ ಜವಾಬ್ದಾರಿ ಇಲ್ಲವೆನ್ನುವುದು; ಮತ್ತು ಗುಂಪುಥಳಿತವನ್ನು ತಡೆದು ಸಂತ್ರಸ್ತರಿಗೆ ನ್ಯಾಯ ಒದಗಿಸುವುದರಲ್ಲಿ ರಾಜ್ಯ ಸರಕಾರಗಳ ವೈಫಲ್ಯವನ್ನು ಮರೆಮಾಚುವುದು.

ಭಾಗವತ್‌ರವರ ಘೋಷಣೆಗಳಿಂದ, ಗುಂಪುಥಳಿತಕ್ಕೊಳಗಾಗಿ ಬದುಕಿ ಉಳಿಯುವವರಿಗೆ ಯಾವುದೇ ರೀತಿಯ ಸಂತೈಸುವಿಕೆಯಾಗಲಿ, ಭದ್ರತೆಯಾಗಲಿ ಅಥವಾ ಪರಿಹಾರವಾಗಲಿ ಸಿಗದಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಆದ್ದರಿಂದ ನವ ಭಾರತದ ಯಾತನೆಯಾಗಿರುವ, ಸಮಸ್ಯೆಯಾಗಿರುವ ಗುಂಪುಥಳಿತ ಸದ್ಯದಲ್ಲೆ ಅಂತ್ಯವಾಗಲಿದೆ ಎಂಬ ಯಾವ ಭರವಸೆಯೂ ಇಲ್ಲ. ಗುಂಪುಥಳಿತ ದೇಶದ ಪಾಲಿಗೆ ದ್ವೇಷ ಮತ್ತು ಭಯದ ದೀರ್ಘವಾದ ರಾತ್ರಿಯನ್ನೆ ತಂದಿದೆ. ಈ ರಾತ್ರಿ ಬೇಗನೆ ಕೊನೆಗೊಳ್ಳುವಂತೆ ಕಾಣುವುದಿಲ್ಲ.

ಕೃಪೆ: www.thehindu.com

Writer - ಹರ್ಷ ಮಂದರ್

contributor

Editor - ಹರ್ಷ ಮಂದರ್

contributor

Similar News