ಮಲೇರಿಯಾ, ಡೆಂಗ್ ಪ್ರಕರಣ: ಮುಂಜಾಗ್ರತೆ ವಹಿಸಲು ಸೂಚನೆ

Update: 2019-10-22 13:42 GMT

ಉಡುಪಿ, ಅ.22: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಲೇರಿಯಾ ರೋಗ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅಲ್ಲಲ್ಲಿ ಡೆಂಗ್ ಪ್ರಕರಣಗಳೂ ಕೂಡ ಕಂಡುಬರುತ್ತಿವೆ. ಉಡುಪಿ ಸರ್ವಿಸ್ ಬಸ್‌ನಿಲ್ದಾಣ, ಸಿಟಿ ಬಸ್‌ನಿಲ್ದಾಣ, ತೆಂಕಪೇಟೆ ಪ್ರದೇಶದಲ್ಲಿ ಕಂಡು ಬಂದ ಮಲೇರಿಯಾ ಇತರ ಕಡೆಗಳಿಗೂ ವ್ಯಾಪಕವಾಗಿ ಹರಡುತ್ತಿದೆ. ಆದ್ದರಿಂದ ಜನತೆ ಮುಂಜಾಗೃತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಎನ್‌ವಿಬಿಡಿಸಿಪಿ ವಿಭಾಗ ವ್ಯಾಪಕ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಅವರ ಈ ಕಾರ್ಯಕ್ಕೆ ಹೊಟೇಲ್, ಕ್ಯಾಂಟೀನ್ ಮಾಲಕರು/ಅಂಗಡಿ ಮಾಲಕರು/ಬಿಲ್ಡರ್ಸ್‌/ಅಪಾರ್ಟ್‌ಮೆಂಟ್ ನಿರ್ವಾಹಕರು/ವ್ಯಾಪಾರಿ ಮಳಿಗೆಗಳು ಮತ್ತು ವಲಸೆ ಕಾರ್ಮಿಕರಿಂದ ಸರಿಯಾದ ಸ್ಪಂದನೆ ಸಿಗದಿರುವುದು ಮಲೇರಿಯಾ ನಿಯಂತ್ರಣ ಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.

ಈ ನಿಟ್ಟಿನಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಹೊಟೇಲ್‌ಗಳು, ಕ್ಯಾಂಟೀನ್‌ಗಳು, ಅಂಗಡಿಗಳು, ಅಪಾರ್ಟ್‌ಮೆಂಟ್‌ಗಳು, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರು/ಸೆಕ್ಯೂರಿಟಿ ಗಾರ್ಡ್‌ಗಳು ಆರೋಗ್ಯ ಇಲಾಖೆಯವರು ಸೂಚಿಸುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು ಮತ್ತು ಅವರು ಸೂಚಿಸುವ ಪ್ರತಿಯೊಬ್ಬರು ಮಲೇರಿಯಾ ರಕ್ತ ಪರೀಕ್ಷೆ ಮಾಡಿಸಿಕೊಂಡು ಸಹಕರಿಸಬೇಕು ಎಂದು ಉಡುಪಿ ನಗರಸಭಾ ಪೌರಾಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಬಂದಾಗ (ಅವರಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ) ಅವರು ಸೂಚಿಸಿದ ಎಲ್ಲಾ ಕ್ರಮಗಳನ್ನು ಕೈಗೊಂಡು,ಸೊಳ್ಳೆ ಲಾರ್ವಾ ಉತ್ಪತ್ತಿಗೆ ಕಾರಣವಾದ ನೀರು ಶೇಖರಣಾ ಟ್ಯಾಂಕ್, ಡ್ರಮ್ ಇತ್ಯಾದಿಗಳನ್ನು ವಾರಕ್ಕೊಂದು ಬಾರಿ ಸ್ವಚ್ಚಗೊಳಿಸಿ, ಸೂಕ್ತ ರೀತಿಯಲ್ಲಿ ಮುಚ್ಚಿಡಬೇಕು. ಈ ರೀತಿ ಕ್ರಮ ಕೈಗೊಳ್ಳುವುದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಅನಿವಾರ್ಯವಾಗಿದೆ.

ಆರೋಗ್ಯ ಇಲಾಖೆಯವರು ಕೈಗೊಳ್ಳುವ ಮುಂಜಾಗೃತ ಕ್ರಮಗಳಿಗೆ ಸಹಕಾರ ನೀಡದೆ ವ್ಯತಿರಿಕ್ತವಾಗಿ ವರ್ತಿಸಿದಲ್ಲಿ ಸಂಬಂಧಪಟ್ಟವರನ್ನು ರೋಗಹರಡಲು ನೇರ ಹೊಣೆಗಾರರೆಂದು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇದಕ್ಕೆ ಅವಕಾಶ ನೀಡದೆ ನಗರಸಭೆಯೊಂದಿಗೆ ಸಹಕರಿ ಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News