ತುಳುನಾಡಿನ ದೈವಾರಾಧನೆಗೆ ನಿಂದನೆ ಆರೋಪ: ದೂರು
ಮಂಗಳೂರು, ಅ.22: ತುಳುನಾಡಿನ ದೈವಾರಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ‘ಜೈ ತುಳುನಾಡ್ ಸಂಘಟನೆ’ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
‘ಟ್ರೋಲ್ ಹೂ ಟ್ರೋಲ್ಸ್ ಕನ್ನಡಿಗ’ ಎಂಬ ಫೇಸ್ಬುಕ್ ಪುಟದಲ್ಲಿ ಅಡ್ಮಿನ್ ದೈವಾರಾಧನೆ ವಿರುದ್ಧ ಕೆಟ್ಟ ಪದಗಳಿಂದ ನಿಂದಿಸಿದ್ದಾನೆ. ಈ ಹಿಂದೆಯೂ ಇದೇ ಪುಟದಲ್ಲಿ ದೈವಗಳ ಚಿತ್ರಗಳನ್ನು ವಿಕೃತವಾಗಿ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದು ಈಗ ಮತ್ತೆ ಮುಂದುವರಿದು ನಮ್ಮ ಧಾರ್ಮಿಕ ನಂಬಿಕೆ ಅಪಹಾಸ್ಯ ಮಾಡುವ ಕೆಲಸ ಮಾಡುತ್ತಿದ್ದಾನೆ. ಇದರಿಂದ ಅಪಾರ ಸಂಖ್ಯೆಯ ದೈವ ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಇದನ್ನು ಪ್ರಶ್ನಿಸಿದವರ ಫೋಟೊಗಳನ್ನು ಎಡಿಟ್ ಮಾಡಿ ವೈಯುಕ್ತಿಕ ತೇಜೋವಧೆ ಮಾಡುತ್ತಿದ್ದಾನೆ. ಈ ಪುಟವನ್ನು ರದ್ದುಗೊಳಿಸಿ ಇದರ ಹಿಂದಿನ ವ್ಯಕ್ತಿಯ ಮೇಲಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತುಳುನಾಡ್ ಸಂಘಟನೆ ಅಧ್ಯಕ್ಷರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್.ಅವರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಡಿಸಿಪಿ ಲಕ್ಷ್ಮೀ ಗಣೇಶ್ ಅವರಿಗೆ ಸೂಚನೆ ನೀಡಿದ್ದಾರೆ.