ವಿಜಯ ಹಝಾರೆ ಟ್ರೋಫಿ: ಕರ್ನಾಟಕ-ತಮಿಳುನಾಡು ಫೈನಲ್‌ಗೆ

Update: 2019-10-23 12:30 GMT

ಬೆಂಗಳೂರು, ಅ.23: ವಿಜಯ ಹಝಾರೆ ಟ್ರೋಫಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಫೈನಲ್‌ಗೆ ಲಗ್ಗೆ ಇಟ್ಟಿವೆ. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ಬುಧವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ತಮಿಳುನಾಡು ತಂಡ ಗುಜರಾತ್ ತಂಡವನ್ನು ಒಂದು ಓವರ್ ಬಾಕಿ ಇರುವಾಗಲೇ 5 ವಿಕೆಟ್‌ಗಳಿಂದ ಮಣಿಸಿದರೆ, ಮತ್ತೊಂದು ಸೆಮಿ ಫೈನಲ್‌ನಲ್ಲಿ ಆತಿಥೇಯ ಕರ್ನಾಟಕ ತಂಡ ಛತ್ತೀಸ್‌ಗಡ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸಿತು.

ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ 3ನೇ ಟೆಸ್ಟ್ ಪಂದ್ಯವನ್ನು ಆಡಿ ನೇರವಾಗಿ ಬೆಂಗಳೂರಿಗೆ ಬಂದಿದ್ದ ಆರ್.ಅಶ್ವಿನ್ ಹಾಗೂ ಮಾಯಾಂಕ್ ಅಗರ್ವಾಲ್ ಕ್ರಮವಾಗಿ ತಮಿಳುನಾಡು ಹಾಗೂ ಕರ್ನಾಟಕ ತಂಡಗಳ ಗೆಲುವಿಗೆ ಕಾಣಿಕೆ ನೀಡಿದರು.

 8 ಓವರ್‌ಗಳಲ್ಲಿ 21 ರನ್‌ಗೆ 1 ವಿಕೆಟ್ ಪಡೆದು ಮಿತವ್ಯಯಿ ಎನಿಸಿದ ಅಶ್ವಿನ್ ಎದುರಾಳಿ ಗುಜರಾತ್ ತಂಡವನ್ನು ಮಳೆಬಾಧಿತ 40 ಓವರ್‌ಗಳ ಪಂದ್ಯದಲ್ಲಿ 9ವಿಕೆಟ್ ನಷ್ಟಕ್ಕೆ 177 ರನ್‌ಗೆ ನಿಯಂತ್ರಿಸಿದರು. ಛತ್ತೀಸ್‌ಗಡ ವಿರುದ್ಧ ಗೆಲ್ಲಲು 224ರನ್ ಗುರಿ ಪಡೆದಿದ್ದ ಕರ್ನಾಟಕ 40 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಕೆ.ಎಲ್ ರಾಹುಲ್(ಔಟಾಗದೆ 88), ದೇವದತ್ತ ಪಡಿಕ್ಕಲ್(92) ಹಾಗೂ ಮಾಯಾಂಕ್ ಅಗರ್ವಾಲ್(ಔಟಾಗದೆ 47)ಕರ್ನಾಟಕದ ಗೆಲುವಿಗೆ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News