ಬಂಗಾಳಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವುದನ್ನು ತಡೆಯಲು ಫೇಸ್‌ಬುಕ್ ವಿಫಲ: ನೂತನ ವರದಿ

Update: 2019-10-30 16:07 GMT

ಹೊಸದಿಲ್ಲಿ, ಅ. 30: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಆರಂಭಿಸಿದ ಬಳಿಕ ಅಸ್ಸಾಂನಲ್ಲಿ ಬಂಗಾಳಿ ಮುಸ್ಲಿಮರನ್ನು ಗುರಿಯಾಗಿರಿಸಿ ಹರಡುತ್ತಿರುವವರಿಗೆ ಮಾಡುತ್ತಿರುವವರಿಗೆ ಕಡಿವಾಣ ಹಾಕಲು ಫೇಸ್‌ಬುಕ್ ವಿಫಲವಾಗಿದೆ ಎಂದು ನೂತನ ವರದಿಯೊಂದು ಹೇಳಿದೆ.

‘ಮೆಗಾಫೋನ್ ಫಾರ್ ಹೇಟ್’ ಹೆಸರಿನ ವರದಿಯನ್ನು ಲಾಭ ರಹಿತ ಜಾಗತಿಕ ಹೋರಾಟಗಾರರ ಗುಂಪು ‘ಆವಾಝ್’ ಬಿಡುಗಡೆ ಮಾಡಿದೆ. 1 ಲಕ್ಷ ಬಾರಿ ಶೇರ್ ಆದ ಹಾಗೂ 54 ಲಕ್ಷ ಬಾರಿ ವೀಕ್ಷಣೆಯಾದ ಬಂಗಾಳಿ ಮುಸ್ಲಿಮರನ್ನು ‘ಕ್ರಿಮಿನಲ್’, ‘ಅತ್ಯಾಚಾರಿಗಳು’, ‘ಹಂದಿಗಳು’, ‘ಭಯೋತ್ಪಾದಕರು’ ಹಾಗೂ ‘ನಾಯಿಗಳು’ ಎಂದು ಕರೆಯುವಂತಹ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ‘ಆವಾಝ್’ ಪತ್ತೆ ಹಚ್ಚಿದೆ.

 ಅಸ್ಸಾಂ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕುರಿತಂತೆ 800ಕ್ಕೂ ಅಧಿಕ ಪೋಸ್ಟ್‌ಗಳು ಹಾಗೂ ಟೀಕೆಗಳನ್ನು ಪರಿಶೀಲಿಸಿದ್ದೇವೆ. ಇದರಲ್ಲಿ ಶೇ. 26.5 ಅಥವಾ 213 ಪೋಸ್ಟ್‌ಗಳು ಹಾಗೂ ಟೀಕೆಗಳು ಫೇಸ್‌ಬುಕ್‌ನ ಸಮುದಾಯ ಗುಣಮಟ್ಟ ನೀತಿಯನ್ನು ಉಲ್ಲಂಘಿಸಿದೆ ಎಂದು ‘ಆವಾಝ್’ ತಿಳಿಸಿದೆ.

ಬೆದರಿಕೆ, ಹೆಣ್ಣುಮಕ್ಕಳಿಗೆ ವಿಷ ನೀಡುವ, ಭ್ರೂಣ ಹತ್ಯೆ ನಡೆಸುವ ಬೆದರಿಕೆ ಸೇರಿದಂತೆ 213 ಪೋಸ್ಟ್‌ಗಳಲ್ಲಿ ಫೇಸ್‌ಬುಕ್ ಕೇವಲ 96ನ್ನು ಮಾತ್ರ ಅಳಿಸಿದೆ ಎಂದು ‘ಆವಾಝ್’ ಆರೋಪಿಸಿದೆ. ‘ಆವಾಝ್’ನ ಹಿರಿಯ ಪ್ರಚಾರಕ ಅಲಾಫಿಯಾ ರೆಯಬ್, ಅಸ್ಸಾಂನ ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಭಾಷಣಕ್ಕೆ ಫೇಸ್‌ಬುಕ್ ಅನ್ನು ಧ್ವನಿವರ್ಧಕದಂತೆ ಬಳಸಲಾಗುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್ ವಕ್ತಾರ, ‘ಆವಾಝ್’ ಸೂಚಿಸಿದ ಎಲ್ಲ ಅಂಶಗಳ ಬಗ್ಗೆ ಫೇಸ್‌ಬುಕ್ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

 2017ರಲ್ಲಿ ಮ್ಯಾನ್ಮಾರ್‌ನಲ್ಲಿ ಬಿಕ್ಕಟ್ಟಿನಿಂದ ನಿರ್ವಸಿತರಾದ ರೊಹಿಂಗ್ಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಫೇಸ್ ಬುಕ್‌ನಲ್ಲಿ ದ್ವೇಷ ಭಾಷಣ ಮಾಡಿದ ರೀತಿಯಲ್ಲೇ ಅಸ್ಸಾಂನ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣ ಮಾಡಲಾಗಿದೆ. ಆದರೆ, ಸಂದರ್ಭ ಮಾತ್ರ ಭಿನ್ನ ಎಂದು ‘ಆವಾಝ್’ ಹೇಳಿದೆ. ಫೇಸ್‌ಬುಕ್‌ನ ನೀತಿ ಉಲ್ಲಂಘಿಸಿದವರಲ್ಲಿ ಅಸ್ಸಾಂನ ಹಜೋಯಿಯ ಬಿಜೆಪಿ ಶಾಸಕ ಶಿಲಾದಿತ್ಯ ದೇವ್ ಕೂಡ ಸೇರಿದ್ದಾರೆ. ಅವರು ‘ಬಾಂಗ್ಲಾದೇಶಿ ಮುಸ್ಲಿಮರು’ ನಮ್ಮ ‘ತಾಯಿ ಹಾಗೂ ಸಹೋದರಿಯರನ್ನು’ ಅತ್ಯಾಚಾರ ಮಾಡುತ್ತಾರೆ ಎಂದು ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದರು. ಈ ಪೋಸ್ಟ್ ಫೇಸ್‌ಬುಕ್‌ನಲ್ಲಿ 800 ಬಾರಿ ಶೇರ್ ಆಗಿತ್ತು.

ಅನಂತರ ಅವರು ಅದನ್ನು ಅಳಿಸಿದ್ದರು. ಆದರೆ, ಫೇಸ್‌ಬುಕ್ ಈ ಎಲ್ಲ ದ್ವೇಷ ಭಾಷಣದ ಅಂಶಗಳನ್ನು ಪರಿಶೀಲಿಸಲು ಮಾನವ ನೇತೃತ್ವದ ತಂಡ ರೂಪಿಸುವ ಬಗ್ಗೆ ಭರವಸೆ ನೀಡಿಲ್ಲ ಎಂದು ‘ಆವಾಝ್’ ಆರೋಪಿಸಿದೆ. ದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿ ಎಂದು ಫೇಸ್‌ಬುಕ್, ವಿಶ್ವಸಂಸ್ಥೆ ಹಾಗೂ ಭಾರತ ಸರಕಾರವನ್ನು ‘ಆವಾಝ್’ ಒತ್ತಾಯಿಸಿದೆ. ತನಿಖೆ ಹಾಗೂ ವಿಚಾರಣೆ ನಡೆಸುವ ಮೂಲಕ ಆನ್‌ಲೈನ್ ದ್ವೇಷ ಭಾಷಣಗಳನ್ನು ನಿಯಂತ್ರಿಸುವತ್ತ ಮೋದಿ ಸರಕಾರ ಕಾರ್ಯ ನಿರ್ವಹಿಸಲಿ ಎಂದು ‘ಆವಾಝ್’ ಆಗ್ರಹಿಸಿದೆ.

Writer - ಕೃಪೆ: theprint.in

contributor

Editor - ಕೃಪೆ: theprint.in

contributor

Similar News