ಪ್ರಸಾದದಲ್ಲಿ ಸಯನೈಡ್ ಬೆರೆಸಿ 2 ವರ್ಷಗಳಲ್ಲಿ 10 ಮಂದಿಯ ಹತ್ಯೆ !

Update: 2019-11-05 18:01 GMT

ವಿಜಯವಾಡ, ನ. 5: ಸಯನೈಡ್ ಬೆರೆಸಿದ ಪ್ರಸಾದ ನೀಡುವ ಮೂಲಕ ಕಳೆದ 2 ವರ್ಷಗಳಲ್ಲಿ 10 ಮಂದಿಯನ್ನು ಹತ್ಯೆಗೈದ ಸರಣಿ ಹಂತಕನೋರ್ವನನ್ನು ಆಂಧ್ರಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವೆಲ್ಲಂಕಿ ಸಿಂಹಾದ್ರಿ ಆಲಿಯಾಸ್ ಶಿವ 2018 ಫೆಬ್ರವರಿಯಿಂದ 2019 ಅಕ್ಟೋಬರ್ 16 ವರೆಗೆ ಕೃಷ್ಣಾ, ಪೂರ್ವ ಗೋದಾವರಿ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಈ ಹತ್ಯೆ ನಡೆಸಿದ್ದಾನೆ.

 ಸರಣಿ ಹಂತಕನನ್ನು ಬಂಧಿಸಿರುವುದಾಗಿ ಪಶ್ಚಿಮ ಗೋದಾವರಿ ಪೊಲೀಸ್ ಅಧೀಕ್ಷಕ ನವದೀಪ್ ಸಿಂಗ್ ಮಂಗಳವಾರ ಸಂಜೆ ಪ್ರಕಟಿಸಿದ್ದಾರೆ.

 ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಷ್ಟ ಅನುಭವಿಸಿದ ಸಿಂಹಾದ್ರಿ ಮಾಂತ್ರಿಕ ಶಕ್ತಿ ಇದೆ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ. ಗುಪ್ತ ನಿಧಿ, ಮೌಲ್ಯಯುತ ಹರಳು ಹಾಗೂ ಚಿನ್ನವನ್ನು ದ್ವಿಗುಣ ಮಾಡುವ ನಾಣ್ಯ ನೀಡಲಾಗುವುದು ಎಂದು ಜನರನ್ನು ಸಂಪರ್ಕಿಸುತ್ತಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಮುಂಗಡ ಹಣ ಸ್ವೀಕರಿಸಿದ ಬಳಿಕ ಸಯನೈಡ್ ಬೆರೆಸಿದ ಪ್ರಸಾದ ನೀಡುತ್ತಿದ್ದ. ಇದರಿಂದ ಹತ್ಯೆಯಾದವರ ಮೃತದೇಹದಲ್ಲಿ ಯಾವುದೇ ಬದಲಾವಣೆ ಕಂಡು ಬರುತ್ತಿರಲಿಲ್ಲ. ಸಹಜ ಸಾವಿನಂತೆ ಕಾಣುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News