ನನ್ನ ಅವಧಿಯಲ್ಲಿ ಅನುಷ್ಠಾನಗೊಂಡ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ: ರಮಾನಾಥ ರೈ

Update: 2019-11-06 10:23 GMT

ಬಂಟ್ವಾಳ, ನ.6: ತನ್ನ ಅವಧಿಯಲ್ಲಿ ಅನುಷ್ಠಾನಗೊಂಡ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ ಬರುತ್ತಿರುವುದು ಸಂತೋಷದ ವಿಚಾರ. ಬಂಟ್ವಾಳ ಕ್ಷೇತ್ರದ ಎಲ್ಲ ಜನರಿಗೂ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ಯೋಜನೆ ತನ್ನ ಅವಧಿಯಲ್ಲಿ ಮಂಜೂರುಗೊಂಡು ಕಾರ್ಯರೂಪಕ್ಕೆ ಬರುತ್ತಿದ್ದು, ತನ್ನ ಕನಸು ಸಾಕಾರಗೊಳ್ಳುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಮಾಣಿ ಮತ್ತು ಇತರ 51 ಜನವಸತಿಗಳಿಗೆ ಬಹುಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಪ್ರದೇಶಗಳಿಗೆ ಬುಧವಾರ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಜೊತೆ ಭೇಟಿ ನೀಡಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

16.46 ಲಕ್ಷ ರೂ. ಅಂದಾಜಿನ ಯೋಜನೆ ಟೆಂಡರ್ ಹಂತಕ್ಕೆ ಬಂದಾಗ 19.18 ಕೋಟಿ ರೂ. ಆಗಿತ್ತು. 51 ಜನವಸತಿ, ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾಪಂ ವ್ಯಾಪ್ತಿಗೆ ಇದು ಅನುಕೂಲವಾಗುತ್ತದೆ. 25,215 ಜನರಿಗೆ  ಪ್ರಯೋಜನವಾಗುವ ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನಾ ಸಮಾರಂಭ ನಡೆಯುವುದು ಸಂತೋಷದ ವಿಚಾರ. ಈ ಯೋಜನೆ ಅನುಷ್ಠಾನ ಸಂದರ್ಭ ಅದರ ಹಿಂದೆ ಬೆನ್ನು ಹಿಡಿದು ಕೆಲಸ ಮಾಡಿ ಜನರಿಗೆ ಅನುಕೂಲ ಮಾಡಿಸಿಕೊಟ್ಟ ತೃಪ್ತಿ ತನಗಿದೆ ಎಂದರು.

 ಸಂಗಬೆಟ್ಟು ಯೋಜನೆ ಅನುಷ್ಠಾನಗೊಂಡಿದೆ, ಬಿಟ್ಟುಹೋದ ತಾಲೂಕಿನ ಇತರ ಪ್ರದೇಶಗಳನ್ನು ಮುಡಿಪು, ಅಳಿಕೆ ಯೋಜನೆಯಡಿ ಸೇರಿಸಿಕೊಳ್ಳಲಾಗುತ್ತದೆ ಎಂದ ರೈ, ಎಲ್ಲ 5 ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗುತ್ತಿರುವುದು ಸಂತಸದ ವಿಷಯ ಎಂದರು.

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ,  ಮಂಜುಳಾ ಮಾಧವ ಮಾವೆ, ಪದ್ಮಶೇಖರ ಜೈನ್, ಎಂ.ಎಸ್.ಮುಹಮ್ಮದ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ತಾಪಂ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಸ್ಥಳೀಯ ಪಂಚಾಯತ್ ಅಧ್ಯಕ್ಷ, ಸದಸ್ಯರು, ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News