ವಿವಾದಾತ್ಮಕ ಗುಜರಾತ್ ಭಯೋತ್ಪಾದನೆ ಮಸೂದೆಗೆ ಕೋವಿಂದ್ ಅಂಕಿತ

Update: 2019-11-06 18:36 GMT

ಹೊಸದಿಲ್ಲಿ,ನ.6: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿವಾದಾತ್ಮಕ ಗುಜರಾತ್ ಭೀತಿವಾದ ಮತ್ತು ಸಂಘಟಿತ ಅಪರಾಧಗಳ ನಿಯಂತ್ರಣ ಮಸೂದೆ (ಜಿಸಿಟಿಒಸಿ)ಗೆ ಅಂಕಿತ ಹಾಕಿದ್ದಾರೆ. ಮಸೂದೆಯು 16 ವರ್ಷಗಳ ಹಿಂದೆ 2003ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಮಂಡನೆಯಾಗಿತ್ತು.

2004ರಿಂದ ಮಸೂದೆಯನ್ನು ಮೂರು ಬಾರಿ ಅಂಗೀಕರಿಸಿದ್ದ ಗುಜರಾತ್ ವಿಧಾನಸಭೆಗಳು ಅದನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಸಲ್ಲಿಸಿದ್ದವು. ಅಂದಿನ ರಾಷ್ಟ್ರಪತಿಗಳಾಗಿದ್ದ ಎಪಿಜೆ ಅಬ್ದುಲ್ ಕಲಾಂ ಒಂದು ಬಾರಿ ಮತ್ತು ಪ್ರತಿಭಾ ಪಾಟೀಲ್ ಅವರು ಎರಡು ಬಾರಿ ಈ ಮಸೂದೆಯನ್ನು ತಿರಸ್ಕರಿಸಿದ್ದರು. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೂ ತನ್ನ ಅಧಿಕಾರಾವಧಿಯಲ್ಲಿ ಕೆಲವು ನಿಬಂಧನೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟನೆ ಕೇಳಿ ಮಸೂದೆಯನ್ನು ಗೃಹ ಸಚಿವಾಲಯಕ್ಕೆ ಮರಳಿಸಿದ್ದರು.

ಸರಕಾರದಿಂದ ದುರುಪಯೋಗದ ಸಾಧ್ಯತೆ,ಕಾರ್ಯವಿಧಾನ ಸುರಕ್ಷತೆಗಳ ಅನುಪಸ್ಥಿತಿ ಮತ್ತು ಆರೋಪಿಗೆ ಲಭ್ಯ ಹಕ್ಕುಗಳ ಮತ್ತು ನೆರವುಗಳನ್ನು ದುರ್ಬಲಗೊಳಿಸಿದ್ದಕ್ಕಾಗಿ ಮಾನಹ ಹಕ್ಕು ಕಾರ್ಯಕರ್ತರು ಮತ್ತು ಸಾಮಾಜಿಕ ಹೋರಾಟಗಾರರು ಉದ್ದೇಶಿತ ಶಾಸನವನ್ನು ಕಟುವಾಗಿ ಟೀಕಿಸಿದ್ದರು.

ಈ ಎಲ್ಲ ವರ್ಷಗಳಲ್ಲಿ ಮೂವರು ರಾಷ್ಟ್ರಪತಿಗಳು ಮಸೂದೆಯನ್ನು ತಿರಸ್ಕರಿಸಿದ್ದರೂ ಇನ್ನೂ ಎರಡು ವಿವಾದಾತ್ಮಕ ನಿಬಂಧನೆಗಳನ್ನು ಮಸೂದೆಯಲ್ಲಿ ಸೇರ್ಪಡೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News