ಮಣಿಪಾಲ: ಕಳವು ಆರೋಪಿ ಸೆರೆ; ಚಿನ್ನಾಭರಣ, ಲ್ಯಾಪ್ಟಾಪ್, ನಗದು ವಶ
ಮಣಿಪಾಲ, ನ. 7: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಹಾಗೂ ಲ್ಯಾಪ್ಟಾಪ್ ಕಳವು ಪ್ರಕರಣಗಳ ಆರೋಪಿ ಯನ್ನು ಮಣಿಪಾಲ ಸಮೀಪದ ಪೆರಂಪಳ್ಳಿ ಬಳಿ ನ.6ರಂದು ಬಂಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಹೊಯ್ಗೆಪದವು ಗ್ರಾಮದ ಯೋಗೀಶ್ ಮೂಲ್ಯ (34) ಬಂಧಿತ ಆರೋಪಿ.
ಈತನಿಂದ ಮಣಿಪಾಲ ಪೊಲೀಸ್ ಠಾಣೆಯ ವಿವಿಧ ಪ್ರಕರಣಗಳಲ್ಲಿ ಕಳವಾಗಿದ್ದ 133 ಗ್ರಾಂ ಚಿನ್ನಾಭರಣಗಳು, 5 ಲ್ಯಾಪ್ ಟಾಪ್ ಹಾಗೂ ಒಂದು ಲಕ್ಷ ರೂ. ನಗದು ಹಣ ಮತ್ತು ಪ್ರಕರಣಕ್ಕೆ ಬಳಸಿದ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 6,65,000ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಯನ್ನು ಪತ್ತೆ ಹಚ್ಚಲು ಉಡುಪಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನಿರ್ದೇಶನದಲ್ಲಿ, ಉಡುಪಿ ಡಿವೈಎಸ್ಪಿ ಜೈಶಂಕರ್ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮಣಿಪಾಲ ಠಾಣಾ ನಿರೀಕ್ಷಕ ಮಂಜುನಾಥ್ ಎಂ., ಪ್ರೊಬೆಷನರಿ ಎಸ್ಸೈಗಳಾದ ರಾಜಶೇಖರ್ ವಂದಲಿ, ಸುಮಾ ಬಿ., ಎಎಸ್ಸೈ ಶೈಲೇಶ್ ಹಾಗೂ ಸಿಬ್ಬಂದಿಯವರಾದ ದಯಾಕರ್ ಪ್ರಸಾದ್, ಅಬ್ದುಲ್ ರಜಾಕ್, ಥಾಮ್ಸನ್ ಜಡ್ಕಲ್, ಪ್ರಸನ್ನ, ಆದರ್ಶ, ಹೋಮ್ ಗಾರ್ಡ್ ಶ್ರೀನಿವಾಸ ಶೆಟ್ಟಿಗಾರ್ ಹಾಗೂ ಚಾಲಕ ಸುದೀಪ್ ಪಾಲ್ಗೊಂಡಿದ್ದಾರೆ.