ಉತ್ತರಪ್ರದೇಶದ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಸಿಜೆಐ ರಂಜನ್ ಗೊಗೊಯ್
ಹೊಸದಿಲ್ಲಿ/ಲಕ್ನೋ, ನ.8: ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಅಯೋಧ್ಯೆ ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ಪ್ರಕರಣದ ಅಂತಿಮ ತೀರ್ಪಿಗೆ ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚಿಸಲು ಮುಖ್ಯ ನಾಯಮೂರ್ತಿ ರಂಜನ್ ಗೊಗೊಯ್ ಉತ್ತರಪ್ರದೇಶದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.
ಸಿಜೆಐ ಗೊಗೊಯ್ ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ತಿವಾರಿ ಹಾಗೂ ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ್ ಸಿಂಗ್ರನ್ನು ತನ್ನ ಚೇಂಬರ್ನಲ್ಲಿ ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆ ಕುರಿತು ಐತಿಹಾಸಿಕ ತೀರ್ಪು ಹೊರಬರುವ ಮೊದಲು ಉತ್ತರಪ್ರದೇಶ ರಾಜ್ಯದಲ್ಲಿ ಯಾವ ರೀತಿಯ ಕಾನೂನು ಸುವವ್ಯಸ್ಥೆ ಮಾಡಲಾಗಿದೆ ಎಂಬ ಕುರಿತು ಸಿಜೆಐ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಪ್ರೀಂಕೋರ್ಟ್ ದಶಕಗಳ ಹಳೆಯದಾದ ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿ ಮುಂದಿನ ವಾರ, ನ.15ಕ್ಕೆ ಮೊದಲು ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ. ಮುಖ್ಯ ನ್ಯಾಯಮೂರ್ತಿ ಗೊಗೊಯ್ ನ.17ರಂದು ನಿವೃತ್ತಿಯಾಗಲಿದ್ದಾರೆ.